ರಾಯಪುರ: ನೇಪಾಳವು ಭೀಕರ ಪ್ರವಾಹದಿಂದ ತತ್ತರಿಸುತ್ತಿದೆ. ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಅದೃಷ್ಟವಶಾತ್ ಪಾರಾಗಿದ್ದಾರೆ. ಆ ಸಾಲಿಗೆ ಛತ್ತೀಸಗಢದ ಐವರು ಪ್ರವಾಸಿಗರು ಸೇರಿದ್ದಾರೆ.
ನೀರ್ಗಲ್ಲು ಕುಸಿತದಿಂದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗುವುದರಿಂದ ಛತ್ತೀಸಗಢದ ಐವರು ಪ್ರವಾಸಿಗರು ಪಾರಾಗಿದ್ದಾರೆ. ಟೀ ಬ್ರೇಕ್ ನಮ್ಮ ಪ್ರಾಣ ಉಳಿಸಿತು ಎಂದು ಅವರು ನಿಟ್ಟುಸಿರು ಬಿಟ್ಟಿದ್ದಾರೆ.
'ಆಗಸ್ಟ್ 26ರಂದು ತಾವು ಸಂಚರಿಸಬೇಕಿದ್ದ ರಸ್ತೆಯು ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಟೀ ಬ್ರೇಕ್ಗಾಗಿ ನಾವು ಒಂದು ಕಡೆ ವಾಹನ ನಿಲ್ಲಿಸಿದ್ದರಿಂದ ಅಪಾಯದಿಂದ ಪಾರಾದೆವು. ವಿರಾಮದ ಸಮಯವು ನಮ್ಮ ಪ್ರಾಣ ಉಳಿಸಿದೆ. ಆ 10-15 ನಿಮಿಷ ನಮಗೆ ವರದಾನವಾಯಿತು'ಎಂದು ಪಾರಾದ ಪ್ರವಾಸಿಗರಲ್ಲೊಬ್ಬರು ಹೇಳಿದ್ದಾರೆ.
ಚಿಕ್ಕ ವಿರಾಮವು ನಮ್ಮನ್ನು ಭಾರಿ ಗಂಡಾಂತರದಿಂದ ಪಾರು ಮಾಡಿದೆ. ಇದಾದ ಬಳಿಕ, ಅದೇ ಸ್ಥಳದಲ್ಲಿ ಬಾಡಿಗೆ ಕಾರಿನಲ್ಲಿ ಎರಡು ದಿನ ಕಳೆದಿದ್ದಾರೆ. ತ್ರಿಶೂಲಿ ನದಿಯ ರೌದ್ರಾವತಾರ, ಜನ ಜಾನುವಾರು, ಅವಶೇಷಗಳು ಕೊಚ್ಚಿಹೋಗುವ ಭಯಾನಕ ದೃಶ್ಯವನ್ನು ಕಣ್ಣಾರೆ ಕಂಡಿದ್ದಾರೆ.
ಈ ಆತಂಕದ ವಾತಾವರಣದ ನಡುವೆ ಸ್ಥಳೀಯ ಮಹಿಳೆಯರು ಬಂದು ರಾಖಿ ಕಟ್ಟಿದರು. ಅವರ ಪ್ರಾರ್ಥನೆ ನಮ್ಮನ್ನು ಕಾಪಾಡಿದೆ ಎಂದು ಪ್ರವಾಸಿಗರು ತಿಳಿಸಿದ್ದಾರೆ.
ರಾಯ್ಪುರದ ಮಾನಾ ಕ್ಯಾಂಪ್ ಪ್ರದೇಶದ ನಿವಾಸಿಗಳಾದ ನಾರಾಯಣ್ ಸೇನ್, ದಿನೇಶ್ ಓಜಾ, ಪ್ರೇಮ್ ಸಿಂಗ್ ಜಗತ್, ಯತೇಂದ್ರ ಪ್ರಕಾಶ್ ಮತ್ತು ದಿನೇಶ್ ಸಿಂಗ್ ಠಾಕೂರ್ ಪ್ರವಾಹದಿಂದ ಪಾರಾದವರಾಗಿದ್ದಾರೆ. ಅವರೆಲ್ಲ 50 ರಿಂದ 60 ವರ್ಷ ವಯಸ್ಸಿನವರಾಗಿದ್ದಾರೆ.

