ಮಂಜೇಶ್ವರ: ಕೇರಳದ ಶಾಲೆಗಳಲ್ಲಿ ಆಯೋಜಿಸಿದ್ದ ರಸಪ್ರಶ್ನೆಯಲ್ಲಿ ಹಿಂದುತ್ವವಾದಿ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಹೊಗಳಿದ್ದಾರೆ ಎನ್ನಲಾದ ಪ್ರಶ್ನೆಯು ಇದೀಗ ವಿವಾದ ಸೃಷ್ಟಿಸಿದೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವು ರಾಜ್ಯದಲ್ಲಿ ಸಂಘ ಪರಿವಾರದ ಅಜೆಂಡಾವನ್ನು ಜಾರಿಗೊಳಿಸುತ್ತಿದೆ ಎಂದು ಎಡಪಕ್ಷ ನೇತೃತ್ವದ ಸಂಘಟನೆಗಳು ಆರೋಪಿಸಿವೆ.
ವಿವಾದದ ಏಕೆ?
ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕುಂಬಳೆ ಉಪಜಿಲ್ಲೆಗಳ ಶಾಲೆಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶಿಕ್ಷಣ ಇಲಾಖೆಯು ರಸಪ್ರಶ್ನೆ ಏರ್ಪಡಿಸಿತ್ತು. ಇದರಲ್ಲಿ ಸಾವರ್ಕರ್ ಅವರನ್ನು ಹೊಗಳಲು ಪ್ರಶ್ನೆಗಳನ್ನು ಕೇಳಲಾಗಿತ್ತು ಎನ್ನಲಾಗಿದೆ. ರಸಪ್ರಶ್ನೆಯಲ್ಲಿ ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆಗೊಳಗಾದ ಸ್ವಾತಂತ್ರ್ಯ ಹೋರಾಟಗಾರ ಯಾರು? ಎಂಬ ಪ್ರಶ್ನೆಗೆ ವಿ.ಡಿ.ಸಾವರ್ಕರ್ ಎಂದು ತಿಳಿಸಲಾಗಿತ್ತು.
ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ, ರಸಪ್ರಶ್ನೆ ನಡೆಸಿದ್ದ ಜಿಲ್ಲಾ ಶಿಕ್ಷಣಾಧಿಕಾರಿಯಿಂದ ವರದಿ ಕೇಳಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ಎನ್. ಶಂಸುದ್ದೀನ್ ತಿಳಿಸಿದ್ದಾರೆ.
ಸಮಾಜ ವಿಜ್ಞಾನದ ಶಿಕ್ಷಕರು ಈ ಪ್ರಶ್ನೆಯನ್ನು ಸಿದ್ಧಪಡಿಸಿದ್ದರು ಎಂದು ಗೊತ್ತಾಗಿದೆ.
ಹಿಂದುತ್ವವಾದಿ ಸಿದ್ಧಾಂತದ ಪ್ರತಿಪಾದಕ, ಮಹಾತ್ಮ ಗಾಂಧಿ ಹತ್ಯೆಯ ಪಿತೂರಿಯಲ್ಲಿ ಭಾಗಿಯಾಗಿದ್ದ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಿದ್ದಕ್ಕೆ ಎಡಪಕ್ಷ ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸ್ವಾತಂತ್ರ್ಯ ಹೋರಾಟದಲ್ಲಿ ಸಂಘ ಪರಿವಾರಕ್ಕೆ ಸ್ಥಾನಮಾನ ನೀಡಲು ಯುಡಿಎಫ್ ಹಾಗೂ ಇಂಡಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪ್ರಯತ್ನಿಸುತ್ತಿವೆ ಎಂದು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಆರೋಪಿಸಿದೆ.
'ಯುಡಿಎಫ್ ಸರ್ಕಾರದಲ್ಲಿ ಶಿಕ್ಷಣ ಖಾತೆಯನ್ನು ನಿರ್ವಹಿಸುತ್ತಿರುವ ಐಯುಎಂಎಲ್ನ ಶಾಸಕರು, ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ ಸಂಘಪರಿವಾರಕ್ಕೆ ಪಾತ್ರ ನೀಡಲು ಮುಂದಾಗಿದ್ದಾರೆ' ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಪಿ.ಎಸ್.ಸಂಜೀವ್ ಆರೋಪಿಸಿದ್ದಾರೆ.

