ನವದೆಹಲಿ: ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವ ವೇಳೆ ಕೇಂದ್ರ ಸಚಿವರ ಮಧ್ಯರಾತ್ರಿಯ ಭೇಟಿಯ ಯಾವುದೇ ಫೋಟೋಗಳನ್ನು ಪ್ರಕಟಿಸದಂತೆ ಕೇಳಿಕೊಂಡಿದ್ದರೂ, ಮಾತು ಮುರಿದು ಸರ್ಕಾರ ಅವುಗಳನ್ನು ಬಿಡುಗಡೆ ಮಾಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಆರೋಪಿಸಿದ್ದಾರೆ.
ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ವಿರೋಧ ಪಕ್ಷದ ನಾಯಕರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳನ್ನು ಪ್ರಕಟಣೆಯೊಂದಿಗೆ ಸೇರಿಸಿದ ಬಳಿಕವೇ, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗಿನ ತಮ್ಮ ಮಧ್ಯರಾತ್ರಿಯ ಭೇಟಿಯ ಫೋಟೋಗಳನ್ನು ಬಿಡುಗಡೆ ಮಾಡಬೇಕು ಎಂಬ ಸ್ಪಷ್ಟ ಒಪ್ಪಂದವಿತ್ತು ಎಂದು ಹೇಳಿದ್ದಾರೆ.
"ಸಚಿವರು ತಮ್ಮದೇ ಛಾಯಾಗ್ರಾಹಕರನ್ನು ಕರೆತಂದಿದ್ದರು. ಅವರು ಆ ಚಿತ್ರಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ನನಗೆ ಭರವಸೆ ನೀಡಿದ್ದರು. ಆದರೆ ಅವರು ಆ ಭರವಸೆಯನ್ನು ಮುರಿದರು" ಎಂದು ವಾಂಗ್ಚುಕ್ ತಿಳಿಸಿದರು.
"ಇತರ ರಾಜಕೀಯ ಪಕ್ಷಗಳ ಸದಸ್ಯರು, ಅವರ ನಾಯಕರು ಮತ್ತು ವಿದ್ಯಾರ್ಥಿ ನಾಯಕರು ಇದರ ಭಾಗವಾಗಬೇಕೆಂದು ನಾನು ಬಯಸುತ್ತೇನೆ ಎಂದು ನಾನು ಅವರಿಗೆ ಹೇಳಿದ್ದೆ. ಇದೊಂದು ಜಂಟಿ ಸಭೆಯಾಗಬೇಕೆಂದು ನಾನು ಬಯಸಿದ್ದೆ" ಎಂದು ಅವರು ಹೇಳಿದರು.
ಸಚಿವರು ಮಧ್ಯರಾತ್ರಿಯಲ್ಲಿ ಆಗಮಿಸಿದ ಕಾರಣ, ತಾವು ಪರ್ಯಾಯ ವ್ಯವಸ್ಥೆಯನ್ನು ಸೂಚಿಸಿರುವುದಾಗಿ ವಾಂಗ್ಚುಕ್ ಹೇಳಿದರು.
"ನಾನು ಉಪವಾಸವನ್ನು ಕೈಬಿಡುತ್ತೇನೆ, ಆದರೆ ವಿರೋಧ ಪಕ್ಷದ ನಾಯಕರು ಮತ್ತು ಸಾಧ್ಯವಾದರೆ ವಿದ್ಯಾರ್ಥಿ ನಾಯಕರ ಫೋಟೋಗಳೊಂದಿಗೆ, ಇದು ಜಂಟಿ ಪ್ರಯತ್ನದಂತೆ ಕಾಣುವಂತೆ, ನನ್ನ ಷರತ್ತುಗಳ ಮೇರೆಗೆ ಸುದ್ದಿ ಬಿಡುಗಡೆ ಮಾಡಬೇಕು ಎಂದು ನಾನು ಹೇಳಿದ್ದೆ" ಎಂದು ಅವರು ಸ್ಪಷ್ಟಪಡಿಸಿದರು.
ವಾಂಗ್ಚುಕ್ ಅವರ ಪ್ರಕಾರ, ಸಚಿವರು ಈ ಪ್ರಸ್ತಾಪಕ್ಕೆ ಒಪ್ಪಿಕೊಂಡರು ಮತ್ತು ಸಭೆಯಲ್ಲಿದ್ದ ಹಿರಿಯ ಗುಪ್ತಚರ ದಳದ ಅಧಿಕಾರಿಗಳನ್ನು ಈ ಒಪ್ಪಂದಕ್ಕೆ ಸಾಕ್ಷಿಗಳನ್ನಾಗಿ ಮಾಡಲಾಗಿತ್ತು.
"ನಾನು ಐಬಿ ಅಧಿಕಾರಿಗಳಿಗೆ, 'ಈ ಒಪ್ಪಂದಕ್ಕೆ ನೀವೇ ಸಾಕ್ಷಿ. ಎಲ್ಲಾ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಾನು ಸುದ್ದಿ ಪ್ರಕಟಿಸುವವರೆಗೆ ಯಾರೂ ಮಾಧ್ಯಮಗಳಿಗೆ ಯಾವುದೇ ಚಿತ್ರಗಳನ್ನು ಬಿಡುಗಡೆ ಮಾಡುವಂತಿಲ್ಲ' ಎಂದು ಹೇಳಿದ್ದೆ. ಅವರು ಒಪ್ಪಿಕೊಂಡರು ಮತ್ತು ಆ ಭರವಸೆಯನ್ನು ನೀಡಿದರು" ಎಂದು ಅವರು ಹೇಳಿದರು.
ಆದರೆ, ಕೆಲವೇ ನಿಮಿಷಗಳಲ್ಲಿ ಒಪ್ಪಂದವನ್ನು ಉಲ್ಲಂಘಿಸಲಾಗಿದೆ ಎಂದು ವಾಂಗ್ಚುಕ್ ಆರೋಪಿಸಿದ್ದಾರೆ.
ಮಧ್ಯರಾತ್ರಿಯ ಒಪ್ಪಂದ ಎಂಬ ಆರೋಪವನ್ನು ತಳ್ಳಿ ಹಾಕಿದ ವಾಂಗ್ಚುಕ್
ಇದೇ ವೇಳೆ, ತಮ್ಮ ಉಪವಾಸವನ್ನು ಕೊನೆಗೊಳಿಸಲು ಸರ್ಕಾರದೊಂದಿಗೆ ಮಧ್ಯರಾತ್ರಿಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದರು.
"ನಾನು ಆ ಒಪ್ಪಂದವನ್ನು ಮೊದಲೇ ಮಾಡಿಕೊಳ್ಳಬಹುದಿತ್ತು. ನಾನು 26 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವಿರಲಿಲ್ಲ. ನಾನು ಇದಕ್ಕಿಂತ ದೊಡ್ಡ ಒಪ್ಪಂದಗಳನ್ನು ಮಾಡಿಕೊಳ್ಳಬಹುದಿತ್ತು. 'ನನ್ನನ್ನು ಶಿಕ್ಷಣ ಮಂತ್ರಿಯನ್ನಾಗಿ ಮಾಡಿ' ಎಂದು ಕೂಡ ನಾನು ಹೇಳಬಹುದಿತ್ತು. ನನಗೆ ಒಪ್ಪಂದ ಮಾಡಿಕೊಳ್ಳುವುದೇ ಇದ್ದಿದ್ದರೆ, ನನಗೆ ಹಲವು ಅವಕಾಶಗಳಿದ್ದವು" ಎಂದು ಅವರು ಹೇಳಿದರು.
ಪ್ರತಿಭಟನಾಕಾರರ ಬೇಡಿಕೆಗಳನ್ನು ಒಪ್ಪಿಕೊಂಡ ನಂತರ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಸರ್ಕಾರಿ ಪ್ರತಿನಿಧಿಗಳು ಜ್ಯೂಸ್ ಅಥವಾ ಸೂಪ್ ನೀಡುವುದು ಲಡಾಖ್ನ ವಾಡಿಕೆ ಎಂದು ಅವರು ಹೇಳಿದರು. ಆದರೆ, ಆ ಕ್ಷಣವನ್ನು ಕೇವಲ ಆಡಳಿತ ಪಕ್ಷವನ್ನು ಮಾತ್ರ ಒಳಗೊಂಡಿರುವ ಘಟನೆಯಾಗಿ ಬಿಂಬಿಸಬಾರದು ಎಂದು ಅವರು ಒತ್ತಾಯಿಸಿದರು.

