ತಿರುವನಂತಪುರಂ: ಕೇರಳದ ಮಲಪ್ಪುರಂನಲ್ಲಿ ಓಣಂ ಹಬ್ಬದ ಸಂಭ್ರಮದ ವೇಳೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಾಲೇಜು ( Students ) ಆವರಣದ ಬಳಿ ಪಾರ್ಕ್ ಮಾಡಿದ್ದ ಕಾರಿನಿಂದ ನಿಷೇಧಿತ ಎಂಡಿಎಂಎ ( MDMA ) ಡ್ರಗ್ಸ್ ಅನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದ ಹಬ್ಬದ ಸಂಭ್ರಮದ ಸಂದರ್ಭದಲ್ಲೇ ಈ ಕೃತ್ಯ ಬೆಳಕಿಗೆ ಬಂದಿರುವುದು ಶಿಕ್ಷಣ ಸಂಸ್ಥೆಗಳ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಮಲಪ್ಪುರಂ ಜಿಲ್ಲೆಯ ಕಾಲೇಜುಗಳಲ್ಲಿ ಓಣಂ ಆಚರಣೆಯ ಹಿನ್ನೆಲೆಯಲ್ಲಿ ಅಬಕಾರಿ ನಿಗಾ ಮತ್ತು ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಇದರ ಭಾಗವಾಗಿ ಗುರುವಾರ ಸಂಜೆ ಮಲಪ್ಪುರಂನ ಕೊಂಡಟ್ಟಿ ಪ್ರದೇಶದಲ್ಲಿರುವ ಕಾಲೇಜೊಂದರ ಸುತ್ತಮುತ್ತ ಮಲಪ್ಪುರಂ ಅಬಕಾರಿ ಆಯಂಟಿ ನಾರ್ಕೋಟಿಕ್ಸ್ ಸ್ಕ್ವಾಡ್ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾಗ ಅಕ್ರಮ ಚಟುವಟಿಕೆ ಪತ್ತೆಯಾಗಿದೆ.
ಪರಾರಿಯಾದ ವಿದ್ಯಾರ್ಥಿಗಳು ಹಾಗೂ ಕಾರು ಜಪ್ತಿ
ಕಾಲೇಜಿನ ಮೈದಾನದ ಬಳಿ ನಿಲ್ಲಿಸಿದ್ದ ಕಾರಿನತ್ತ ಅಬಕಾರಿ ವಾಹನ ತೆರಳುತ್ತಿದ್ದಂತೆ, ಅದರೊಳಗೆ ಕುಳಿತಿದ್ದ ಮೂವರು ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳು ಗಾಬಗೊಂಡು ಕಾರಿನಿಂದಿಳಿದು ಓಡಿಹೋಗಿದ್ದಾರೆ. ವಿದ್ಯಾರ್ಥಿಗಳು ಭಯದಿಂದ ಪರಾರಿಯಾಗುತ್ತಿರುವ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಅಧಿಕಾರಿಗಳು ಆ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದ್ದಾರೆ.
ವಿದ್ಯಾರ್ಥಿಗಳು ಓಡಿಹೋದ ಬಳಿಕ ಆ ಶಂಕಿತ ಕಾರನ್ನು ಪರಿಶೀಲನೆಗೆ ಒಳಪಡಿಸಿದಾಗ, ಅದರೊಳಗೆ ಒಂದು ಗ್ರಾಂ ರಾಸಾಯನಿಕ ಮಾದಕ ವಸ್ತುವಾದ ಎಂಡಿಎಂಎ ಇರುವುದು ಪತ್ತೆಯಾಗಿದೆ. ತಕ್ಷಣವೇ ಕಾರನ್ನು ವಶಕ್ಕೆ ಪಡೆದುಕೊಂಡಿರುವ ಅಬಕಾರಿ ಇಲಾಖೆಯು, ಸ್ಥಳದಿಂದ ಪರಾರಿಯಾಗಿರುವ ಮೂವರು ವಿದ್ಯಾರ್ಥಿಗಳನ್ನು ಶಂಕಿತ ಆರೋಪಿಗಳೆಂದು ಪರಿಗಣಿಸಿ ತೀವ್ರ ತನಿಖೆ ಆರಂಭಿಸಿದೆ.
ಈ ಕಾರ್ಯಾಚರಣೆಯನ್ನು ಅಬಕಾರಿ ವೃತ್ತ ನಿರೀಕ್ಷಕರಾದ ಪಿ.ಕೆ. ಮುಹಮ್ಮದ್ ಶಫೀಕ್ ನೇತೃತ್ವದಲ್ಲಿ ಕೈಗೊಳ್ಳಲಾಗಿದ್ದು, ತನಿಖಾ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಅರುಣ್ಕುಮಾರ್, ಸಿವಿಲ್ ಅಬಕಾರಿ ಅಧಿಕಾರಿ ಮುಹಮ್ಮದ್ ನೌಫಲ್ ಹಾಗೂ ಮಹಿಳಾ ಸಿವಿಲ್ ಅಬಕಾರಿ ಅಧಿಕಾರಿ ಧನ್ಯ ಪಾಲ್ಗೊಂಡಿದ್ದರು.
ಹಬ್ಬಗಳ ಹೆಸರಿನಲ್ಲಿ ಯುವಜನತೆಯನ್ನು ದಾರಿತಪ್ಪಿಸುವ ಇಂತಹ ಕೃತ್ಯಗಳ ವಿರುದ್ಧ ಮುಂಬರುವ ದಿನಗಳಲ್ಲಿ ತಪಾಸಣೆಯನ್ನು ಮತ್ತಷ್ಟು ಕಠಿಣಗೊಳಿಸುವುದಾಗಿ ಇಲಾಖೆ ಎಚ್ಚರಿಸಿದೆ.

