ಕೋಲ್ಕತಾ: ಸರಕಾರಿ ಶಾಲೆಗಳ ದುರವಸ್ಥೆಯ ಕುರಿತು ಧ್ವನಿ ಎತ್ತಿದ ಬಳಿಕ ತಾನು ಓದಿದ್ದ ಸರಕಾರಿ ಶಾಲೆಗೆ ಭೇಟಿ ನೀಡಿದ್ದ ಪಶ್ಚಿಮ ಬಂಗಾಳದ ವಿದ್ಯಾರ್ಥಿ ಅಬ್ದುಲ್ ಬೆಂಬಲಕ್ಕೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ನಿಂತಿದ್ದು, ಆತನ ತಂದೆಯ ಸಾವಿಗೆ ಕಾರಣರಾದವರನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಸರಕಾರಿ ಶಾಲೆಗಳ ಪರಿಸ್ಥಿತಿಯ ಬಗ್ಗೆ ಮಾತನಾಡಿದ ನಂತರ ಅಬ್ದುಲ್ ಶಾಲೆಯನ್ನು ಪರಿಶೀಲಿಸಲು ಹೋಗಿದ್ದ. ಬಳಿಕ ಬಿಜೆಪಿಗೆ ಸೇರಿದವರೆನ್ನಲಾದ ವ್ಯಕ್ತಿಗಳು ಅಬ್ದುಲ್ ಮತ್ತು ಆತನ ಕುಟುಂಬದ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಆತನ ತಂದೆ ಕೊಲ್ಲಲ್ಪಟ್ಟಿದ್ದಾರೆ ಎಂದು ದೀಪ್ಕೆ ಎಕ್ಸ್ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.
'ಉತ್ತಮ ಶಾಲೆಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಕ್ಕಾಗಿಯೇ ಜನರನ್ನು ಹತ್ಯೆ ಮಾಡುತ್ತಿರುವುದು ನನ್ನ ರಕ್ತ ಕುದಿಯುವಂತೆ ಮಾಡಿದೆ' ಎಂದು ದೀಪ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಜೆಪಿ ತಂಡವು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ನ್ಯಾಯಕ್ಕಾಗಿ ಅಬ್ದುಲ್ ಹಾಗೂ ಆತನ ಕುಟುಂಬದೊಂದಿಗೆ ಹೋರಾಡಲಿದೆ ಎಂದು ಹೇಳಿರುವ ದೀಪ್ಕೆ, ಈ ಕೊಲೆಗೆ ಕಾರಣರಾದವರನ್ನು ಬಂಧಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಸಿಜೆಪಿ ಅಬ್ದುಲ್ ಮತ್ತು ಆತನ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿರುವ ದೀಪ್ಕೆ, ಬೆದರಿಸುವ ಯತ್ನಗಳ ಹೊರತಾಗಿಯೂ ಉತ್ತಮ ಸರಕಾರಿ ಶಾಲೆಗಳಿಗಾಗಿ ತನ್ನ ಸಂಘಟನೆಯು ಅಭಿಯಾನವನ್ನು ಮುಂದುವರಿಸಲಿದೆ ಎಂದು ಹೇಳಿದ್ದಾರೆ.
ದೀಪ್ಕೆ ಈಗಾಗಲೇ 'ಸ್ಕೂಲ್ ಠೀಕ್ ಕರೋ (ಶಾಲೆ ಸರಿ ಮಾಡಿ)' ಅಭಿಯಾನವನ್ನು ಪ್ರಾರಂಭಿಸಿದ್ದು, ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸುತ್ತಿದ್ದಾರೆ.
ಈ ಅಭಿಯಾನವು ಸರಕಾರಿ ಶಾಲೆಗಳ ಸಾಮಾಜಿಕ ಪರಿಶೋಧನೆಗೆ ಕರೆ ನೀಡಿದೆ. ಕುಡಿಯುವ ನೀರು,ವಿದ್ಯುತ್,ಸುಸಜ್ಜಿತ ಶೌಚಾಲಯಗಳು, ಬೆಂಚ್ಗಳು ಮತ್ತು ಮಧ್ಯಾಹ್ನದ ಬಿಸಿಯೂಟದಂತಹ ಸಮಸ್ಯೆಗಳನ್ನು ದಾಖಲಿಸುವಂತೆ ಪೋಷಕರು ಮತ್ತು ಸ್ಥಳೀಯ ನಿವಾಸಿಗಳಿಗೆ ಮನವಿ ಮಾಡಲಾಗಿದೆ.
ಈ ಹಿಂದೆ ಮಹಾರಾಷ್ಟ್ರದ ತನ್ನ ಸ್ವಗ್ರಾಮದ ಸರಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದ ದೀಪ್ಕೆ ಕುಡಿಯುವ ನೀರಿನ ಕೊರತೆ, ಕೊಳಕು ಶೌಚಾಲಯಗಳು, ಮುರಿದ ಕಿಟಕಿಗಳು ಮತ್ತು ಸಾಕಷ್ಟು ನೀರು ಪೂರೈಕೆಯಾಗದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದರು.
ಈ ಅಭಿಯಾನವನ್ನು ದೇಶಾದ್ಯಂತ ಸರಕಾರಿ ಶಾಲೆಗಳಿಗೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

