ಹಿಂಗೋಲಿ: ಸಿಜೆಪಿಯ 'ಸ್ಕೂಲ್ ಠೀಕ್ ಕರ್ದೊ' ಅಭಿಯಾನದ ಭಾಗವಾಗಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ತಮ್ಮ ತವರು ಜಿಲ್ಲೆ ಹಿಂಗೋಲಿಯ ಅವುಂದಾದ ಸರ್ಕಾರಿ ಶಾಲೆಗೆ ಭೇಟಿ ಇತ್ತರು. ಈ ವೇಳೆ ಶಾಲೆಯಲ್ಲಿ ಅವಧಿ ಮೀರಿದ ಆಹಾರ ಪೊಟ್ಟಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಕೆಟ್ಟು ಹೋದ ವಾಟರ್ ಫಿಲ್ಟರ್ ಹಾಗೂ ಶೌಚಗೃಹಗಳಲ್ಲಿ ನೀರಿನ ಪೂರೈಕೆ ಇಲ್ಲದಿರುವುದನ್ನೂ ಅವರು ಗಮನಿಸಿದರು.
ವಿದ್ಯಾರ್ಥಿಗಳಿಗೆ ನೀಡಲು ಶಾಲೆಯಲ್ಲಿ ಸಂಗ್ರಹಿಸಲಾಗಿದ್ದ ಆಹಾರದ ಪೊಟ್ಟಣಗಳನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದ ಅವರು, ಅವುಗಳ ಅವಧಿ ಫೆಬ್ರುವರಿಗೆ ಮುಗಿದಿದೆ ಎಂದಿದ್ದಾರೆ.
'ಫೆಬ್ರುವರಿಯಲ್ಲಿ ಅವಧಿ ಮುಗಿದಿರುವ ಪೊಟ್ಟಣಗಳಿಂದ ವಿದ್ಯಾರ್ಥಿಗಳ ಆಹಾರ ತಯಾರಿಸಲಾಗುತ್ತಿದೆ. ಈಗ ಸೆಪ್ಟೆಂಬರ್ ಆಗಮಿಸುತ್ತಿದೆ. ಇದೇ ಪೊಟ್ಟಣದಿಂದ ಸಚಿವರ ಮಕ್ಕಳಿಗೆ ಸಿಬ್ಬಂದಿ ಆಹಾರ ನೀಡುವರೇ? ಬಡ ಮಕ್ಕಳಿಗೆ ಅವಧಿ ಮೀರಿದ ಆಹಾರ ನೀಡುವಿರೇ?' ಎಂದು ದೀಪ್ಕೆ ಪ್ರಶ್ನಿಸಿದ್ದಾರೆ.
ಶಾಲೆಯ ಓವರ್ಹೆಡ್ ಟ್ಯಾಂಕ್ ತಪಾಸಣೆ ಮಾಡಿದ ಅವರು, ಅದರಲ್ಲಿರುವ ನೀರನ್ನೂ ಪರಿಶೀಲಿಸಿದರು. ಅಲ್ಲದೆ ಸಂಬಂಧಪಟ್ಟ ಅಧಿಕಾರಿಯ ಜೊತೆಯೂ ಮಾತುಕತೆ ನಡೆಸಿದರು.
'ಅವಧಿ ಮೀರಿದ ಆಹಾರವನ್ನೇ ಆರು ತಿಂಗಳಿನಿಂದ ಬಳಕೆ ಮಾಡಲಾಗುತ್ತಿದೆ. ಫಿಲ್ಟರ್ ಇದ್ದರೂ, ಅದು ಹಾಳಾಗಿದ್ದರಿಂದ ವಿದ್ಯಾರ್ಥಿಗಳು ಕೊಳವೆಬಾವಿ ನೀರನ್ನು ಕುಡಿಯುತ್ತಿದ್ದಾರೆ. ಶೌಚಗೃಹದಲ್ಲಿ ನೀರೇ ಇಲ್ಲ' ಎಂದು ಸಂಬಂಧಪಟ್ಟ ಅಧಿಕಾರಿಗೆ ಅವರು ಫೋನ್ ಮೂಲಕ ತಿಳಿಸಿದರು.
ವಿದ್ಯಾರ್ಥಿಗಳನ್ನು ಪ್ರಾಣಿಗಿಂತಲೂ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಅವರು ದೂರಿದರು.
ನಾಲ್ಕನೇ ತರಗತಿವರೆಗೆ ಇರುವ ಶಾಲೆಯಲ್ಲಿ ಕೇವಲ ಎರಡು ಕೋಣೆಗಳಿದ್ದು, 87 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದರು.
ಸಿಜೆಪಿ ವತಿಯಿಂದ ಆಗಸ್ಟ್ 15ರಿಂದ ಈ ಅಭಿಯಾನ ನಡೆಯುತ್ತಿದ್ದು, ಗ್ರಾಮೀಣ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕೊರತೆಯನ್ನು ಗುರುತಿಸುವುದು ಹಾಗೂ ಸರ್ಕಾರವನ್ನು ಹೊಣೆಗಾರನನ್ನಾಗಿ ಮಾಡುವುದು ಅದರ ಉದ್ದೇಶ.

