ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ (80) ಗುರುವಾರ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು.
ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್ ಕುಮಾರ್ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು.
ಅವರನ್ನು ತಪಾಸಣೆ ನಡೆಸಿದ ವೈದ್ಯರು ಈಗಾಗಲೇ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಅವರ ಸಾವಿಗೆ ನಿಖರವಾದ ಕಾರಣವೇನೆಂಬುದನ್ನು ಆಸ್ಪತ್ರೆ ಆಡಳಿತ ಮಂಡಳಿ ಇನ್ನೂ ಸ್ಪಷ್ಟಪಡಿಸಿಲ್ಲ.
1984ರ ಅಕ್ಟೋಬರ್ 31ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸಿಖ್ ಅಂಗರಕ್ಷಕರಾದ ಸತ್ಚಂತ್ ಸಿಂಗ್ ಮತ್ತು ಬೀಯಂತ್ ಸಿಂಗ್ ಹತ್ಯೆ ಮಾಡಿದ ನಂತರ ದೆಹಲಿ ಸೇರಿದಂತೆ ದೇಶದಾದ್ಯಂತ ಸಿಖ್ ವಿರೋಧಿ ದಂಗೆ ಭುಗಿಲೆದ್ದಿತ್ತು. ಶಸ್ತ್ರಸಜ್ಜಿತ ಗುಂಪುಗಳು ಸಿಖ್ಖರ ಮನೆಗಳು ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿದ್ದವು. ಈ ಹಿಂಸಾಚಾರದಲ್ಲಿ ರಾಜಧಾನಿ ದೆಹಲಿಯಲ್ಲೇ 3,000ಕ್ಕೂ ಹೆಚ್ಚು ಸಿಖ್ಖರು ಹತ್ಯೆಗೀಡಾಗಿದ್ದರು.
ಇಂದಿರಾ ಗಾಂಧಿ ಅವರ ಹತ್ಯೆಯ ಮರುದಿನ, ಅಂದರೆ 1984ರ ನವೆಂಬರ್ 1 ಮತ್ತು 2ರಂದು ಪಾಲಂ ಕಾಲೋನಿ ಪ್ರದೇಶದಲ್ಲಿ ನಡೆದ ದಂಗೆಯಲ್ಲಿ ಐವರ ಹತ್ಯೆಗೆ ಸಜ್ಜನ್ ಕುಮಾರ್ ಆಪ್ತರು ಕಾರಣ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಅವರಿಗೆ 2018ರ ಡಿಸೆಂಬರ್ 17ರಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿತ್ತು.

