ನವದೆಹಲಿ: ಪಾದಚಾರಿ ಮಾರ್ಗಗಳ (ಫುಟ್ಪಾತ್) ಅಸ್ತಿತ್ವವು ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಸೋಮವಾರ ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ಪಾದಚಾರಿಗಳಿಗಾಗಿ ಸೂಕ್ತವಾಗಿ ಗುರುತಿಸಲಾದ ಮತ್ತು ಅತಿಕ್ರಮಣ ಮುಕ್ತ ಜಾಗವನ್ನು ಕಲ್ಪಿಸಲು ತನ್ನ ನಿರ್ದೇಶನಗಳ ಜಾರಿಯ ಕುರಿತು ವರದಿ ನೀಡುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಯುಟಿಗಳು) ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರ ಪೀಠವು, ರಸ್ತೆ ಇರುವ ಪ್ರತಿಯೊಂದು ಕಡೆಯೂ ಪಾದಚಾರಿಗಳಿಗೆ ಸರಿಯಾಗಿ ಜಾಗವನ್ನು ಕಾಯ್ದಿರಿಸುವುದನ್ನು ಖಚಿತಪಡಿಸಿಕೊಳ್ಳಲು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಕಕ್ಷಿಗಳನ್ನಾಗಿ ಸೇರ್ಪಡೆಗೊಳಿಸಿತು.
ಪಾದಚಾರಿಗಳಿಗೆ ಸರಿಯಾದ ಜಾಗವನ್ನು ಗುರುತಿಸುವುದು ಮೊದಲ ಹೆಜ್ಜೆಯಾಗಿದೆ. ನಡಿಗೆಯಲ್ಲಿ ಸುರಕ್ಷತೆಯ ಭರವಸೆ ಇರಬೇಕು. ರಸ್ತೆ ಎಲ್ಲಿದೆಯೋ ಅಲ್ಲೆಲ್ಲ ಜನರು ಗುರುತಿಸಲಾದ ಜಾಗದಲ್ಲೇ ಓಡಾಡಬೇಕು ಎಂದು ಕೇಂದ್ರ ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರಿಗೆ ಪೀಠವು ತಿಳಿಸಿತು.
ರಸ್ತೆಗಳು ರಾಜ್ಯ ವಿಷಯವಾಗಿರುವುದರಿಂದ ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಪಾದಚಾರಿಗಳಿಗೆ ಸೂಕ್ತ ಜಾಗವನ್ನು ಸೃಷ್ಟಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲಹೆಗಳನ್ನು ನೀಡಿವೆ ಎಂದು ನಟರಾಜ್ ಪೀಠದ ಗಮನಕ್ಕೆ ತಂದರು.
ಸಚಿವಾಲಯಗಳು ನೀಡಿದ ಸಲಹೆಗಳಿಗೆ ಉತ್ತರಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ ಪೀಠವು, ಪಾದಚಾರಿ ಮಾರ್ಗಗಳ ಅಸ್ತಿತ್ವವು ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಪುನರುಚ್ಚರಿಸಿತು.
ಆ.3ರಂದು ನಡೆದ ವಿಚಾರಣೆಯಲ್ಲಿ, ಪ್ರತಿಯೊಂದು ರಸ್ತೆಯಲ್ಲೂ ಪಾದಚಾರಿಗಳಿಗಾಗಿ ಪ್ರತ್ಯೇಕ ಜಾಗವನ್ನು ಕಾಯ್ದಿರಿಸುವುದನ್ನು ಖಚಿತಪಡಿಸಿಕೊಳ್ಳಲು ಪೀಠವು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತ್ತು.
ಜೂನ್ 19ರಂದು ನೀಡಿದ್ದ ಪ್ರಮುಖ ತೀರ್ಪಿನಲ್ಲಿ,ಗುರುತಿಸಲಾದ ಕಾಲುದಾರಿಯಲ್ಲಿ ನಡೆಯುವ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು.

