ಲಖನೌ: ಮಧ್ಯಾಹ್ನದ ಬಿಸಿಯೂಟದ ವೇಳೆ ವಿದ್ಯಾರ್ಥಿಗಳಿಗೆ ತಟ್ಟೆ ನೀಡದೆ ಊಟ ಬಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯಶಿಕ್ಷಕಿ ಕಿರಣ್ ದೇವಿ ಎಂಬವರನ್ನು ಅಮಾನತು ಮಾಡಲಾಗಿದೆ.
ಬಲ್ಲಿಯಾದ ಸಿಯಾರ್ ಶಿಕ್ಷಣ ಬ್ಲಾಕ್ನ ಪಾಲಿಯಾ ಗ್ರಾಮದ ಸಂಯುಕ್ತ ಶಾಲೆಯಲ್ಲಿ ಮಕ್ಕಳಿಗೆ ತಟ್ಟೆ ನೀಡದೆ, ರೊಟ್ಟಿ ಮತ್ತು ಪಲ್ಯವನ್ನು ನೇರವಾಗಿ ಕೈಗೆ ನೀಡಲಾಗಿತ್ತು.
ಇದಕ್ಕೆ ಸಂಬಂಧಿಸಿದ ವಿಡಿಯೊ ಜುಲೈ 31ರಂದು ಸಾಮಾಜಿಕ ಮಧ್ಯಮಗಳಲ್ಲಿ ಹರಿದಾಡಿತ್ತು.
ಜಿಲ್ಲೆಯ ಶಿಕ್ಷಣಾಧಿಕಾರಿ ಮನೀಶ್ ಕುಮಾರ್ ಸಿಂಗ್ ಅವರು ಈ ಬಗ್ಗೆ ಮಾತನಾಡಿದ್ದು, ಏಪ್ರಿಲ್ 20ರಂದೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದಿದ್ದಾರೆ.
ಘಟನೆಯ ವಿಡಿಯೊವನ್ನು ಅತಿಥಿ ಶಿಕ್ಷಕಿ ನಿರ್ಮಲಾ ಭಾರತಿ ಎಂಬವರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು. ಆ ವಿಡಿಯೊ ಇಟ್ಟುಕೊಂಡು ಮುಖ್ಯಶಿಕ್ಷಕಿಯನ್ನು ಬ್ಲಾಕ್ಮೇಲ್ ಮಾಡುವ ಉದ್ದೇಶ ಅವರದ್ದಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಸದ್ಯ ಕಿರಣ್ ದೇವಿ ಅವರನ್ನು ಅಮಾನತು ಮಾಡಲಾಗಿದೆ.
ನವನಗರ ಕ್ಷೇತ್ರ ಶಿಕ್ಷಣಾಧಿಕಾರಿ ಪಂಕಜ್ ಕುಮಾರ್ ಸಿಂಗ್ ಅವರಿಗೆ ತನಿಖೆಯ ಹೊಣೆ ವಹಿಸಲಾಗಿದ್ದು, 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

