ಪ್ರಯಾಗ್ರಾಜ್ (PTI): ಭಾರತದ ಯುವಜನತೆಯು ದೇಶದ ಅತಿದೊಡ್ಡ ಶಕ್ತಿಯಾಗಿದ್ದು, ಅವರ ಸಾಮರ್ಥ್ಯಕ್ಕೆ ಸಾಟಿ ಇಲ್ಲ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಇಲ್ಲಿನ ಕೆ.ಪಿ. ಮೈದಾನದಲ್ಲಿ ನಡೆದ 'ಛಾತ್ರೋಂ ಕಿ ಗೂಂಜ್' (ವಿದ್ಯಾರ್ಥಿಗಳ ಧ್ವನಿ) ಕಾರ್ಯಕ್ರಮದಲ್ಲಿ ಯುವಜನತೆಯನ್ನು ಉದ್ದೇಶಿಸಿ ರಾಹುಲ್ ಮಾತನಾಡಿದ್ದಾರೆ.
'ಅಮೆರಿಕ, ಚೀನಾ, ರಷ್ಯಾ ದೇಶಗಳ ಬಗ್ಗೆ ಬಹಳ ಚರ್ಚೆಗಳು ನಡೆಯುತ್ತಿವೆ. ಆದರೆ, ಭಾರತದ ಯುವಜನತೆಗೆ ಸಾಟಿಯಾದದ್ದು ಯಾವುದೂ ಇಲ್ಲ. ದೇಶದ 40 ಕೋಟಿ ಯುವಜನರೇ ಅತಿದೊಡ್ಡ ಶಕ್ತಿ' ಎಂದೂ ಪ್ರಶಂಸಿಸಿದ್ದಾರೆ.
ಇದೇ ವೇಳೆ, ದೇಶದ ಶಿಕ್ಷಣ ವ್ಯವಸ್ಥೆ ಕುರಿತು ಮಾತನಾಡಿ, 'ಶೈಕ್ಷಣಿಕ ಪ್ರಮಾಣ ಪತ್ರಗಳಿಗೆ ಭಾರತದಲ್ಲಿ ಈಗ ಯಾವ ಬೆಲೆಯೂ ಇಲ್ಲ. ಏಕೆಂದರೆ ಅವು ನಿಮಗೆ ಉದ್ಯೋಗವನ್ನು ನೀಡಲಾರವು' ಎಂದು ಟೀಕಿಸಿದ್ದಾರೆ.
ಜತೆಗೆ 'ಉದ್ಯೋಗ ಅವಕಾಶದಎಲ್ಲಾ ಬಾಗಿಲುಗಳು ಮುಚ್ಚಿಹೋಗಿವೆ. ಉತ್ಪಾದನಾ ವಲಯದ ಕುಸಿತ,ಸಾಲ ಸೌಲಭ್ಯಗಳನ್ನು ಪಡೆಯುವಲ್ಲಿ ಎದುರಾಗಿರುವ ತೊಂದರೆಗಳುಪ್ರಶ್ನೆಪತ್ರಿಕೆಗಳ ಸೋರಿಕೆ, ಉದ್ಯೋಗಗಳನ್ನು ಅತಿಕ್ರಮಿಸಿಕೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಎಲ್ಲವೂ ಸೇರಿ ಯುವಜನತೆಯ ಭವಿಷ್ಯಕ್ಕೆ ಧಕ್ಕೆ ತರುತ್ತಿವೆ' ಎಂದೂ ರಾಹುಲ್ ಅವರು ಹೇಳಿದ್ದಾರೆ.
ಇತ್ತೀಚೆಗೆ ದೇಶದ ವಿವಿಧೆಡೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳ ಬಗ್ಗೆಯೂ ಮಾತನಾಡಿ, 'ವಿದ್ಯಾರ್ಥಿಗಳು ತಮ್ಮೊಳಗಿನ ಭಯವನ್ನು ಮೆಟ್ಟಿ ಕಗ್ಗತ್ತಲೆಯಲ್ಲಿ ಬೆಳಕನ್ನು ಚೆಲ್ಲಿದ್ದಾರೆ. ಆ ಮೂಲಕ ದೇಶವನ್ನು ಬದಲಾಯಿಸಲು ಸಹಾಯ ಮಾಡಿದ್ದಾರೆ. ನಾವು ಎಂದಿಗೂ ದ್ವೇಷ-ಹಿಂಸಾಚಾರವನ್ನು ಆಶ್ರಯಿಸುವುದಿಲ್ಲ. ಪ್ರೀತಿ-ವಿಶ್ವಾಸದ ಮೂಲಕವೇ ವ್ಯವಸ್ಥೆ ಯನ್ನು ಬದಲಿಸುತ್ತೇವೆ. ಯುವಜನರೂ ಇದೇ ಹಾದಿಯನ್ನು ಅನುಸರಿಸಬೇಕು' ಎಂದೂ ಕರೆ ನೀಡಿದ್ದಾರೆ.
ಮಳೆಯ ನಡುವೆ, ಕೆಸರು ತುಂಬಿದ್ದ ಮೈದಾನದಲ್ಲಿಯೇ ಶನಿವಾರ ಕಾರ್ಯಕ್ರಮ ನಡೆದಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಲವು ವಿದ್ಯಾರ್ಥಿಗಳು ಹಾಸ್ಟೆಲ್ಗಳಲ್ಲಿನ ಸಮಸ್ಯೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಕಳವಳಗಳ ಬಗ್ಗೆ ಮಾತನಾಡಿ, ರಾಹುಲ್ ಅವರೊಂದಿಗೆ ಈ ವಿಚಾರಗಳನ್ನು ಚರ್ಚಿಸಲು ಬಯಸಿರುವುದಾಗಿಯೂ ಹೇಳಿದ್ದಾರೆ.

