ಜಕಾರ್ತಾ: ಇಂಡೋನೇಷ್ಯಾದ ಮಧುರಾ ದ್ವೀಪದ ಸಮೀಪ ರವಿವಾರ ಬೆಳಿಗ್ಗೆ ಸುಮಾರು 250 ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಕೆಎಂಪಿ ಮುಟಿಯಾರಾ ಸೆಂಟೋಸಾ-2 ದೋಣಿಗೆ ಬೆಂಕಿ ತಗುಲಿದ ಪರಿಣಾಮ ಕನಿಷ್ಠ ಐದು ಮಂದಿ ಮೃತಪಟ್ಟಿದ್ದು, 41 ಮಂದಿ ನಾಪತ್ತೆಯಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುರಬಯಾದ ತಾಂಜಂಗ್ ಪೆರಾಕ್ ಬಂದರಿನಿಂದ ದಕ್ಷಿಣ ಸುಲವೇಸಿಯ ಮಕಾಸ್ಸರ್ ಗೆ ತೆರಳುತ್ತಿದ್ದ ದೋಣಿಯಲ್ಲಿ ಪ್ರಯಾಣ ಆರಂಭವಾದ ಕೆಲವೇ ಗಂಟೆಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಕ್ಯಾಪ್ಟನ್ ಮಾಹಿತಿ ನೀಡಿದರು. ಇದಾದ ಬಳಿಕ ದೋಣಿಯೊಂದಿಗಿನ ಸಂಪರ್ಕ ಕಡಿತಗೊಂಡಿತು.
ಸುರಬಯಾ ಶೋಧ ಮತ್ತು ರಕ್ಷಣಾ ಕಚೇರಿ ಮಾಹಿತಿ ಪ್ರಕಾರ, ಸಪುಡಿ ದ್ವೀಪದ ಉತ್ತರಕ್ಕೆ ಸುಮಾರು 19 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿ ವೇಗವಾಗಿ ವ್ಯಾಪಿಸಿ ದೋಣಿಯ ಬಹುತೇಕ ಭಾಗವನ್ನು ಆವರಿಸಿತು. ರಕ್ಷಣೆಗೆ ಕಾಯುತ್ತಿದ್ದ ಪ್ರಯಾಣಿಕರು ದೋಣಿಯ ಮುಂಭಾಗ ಮತ್ತು ಮೇಲಿನ ಡೆಕ್ನಲ್ಲಿ ಸೇರಿಕೊಂಡಿದ್ದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಮೀಪದಲ್ಲಿದ್ದ ಟಿಬಿ ಹಸ್ನೂರ್-26 ಮತ್ತು ಬ್ರಿಟಿಷ್ ಮೆಂಟರ್ ಸೇರಿದಂತೆ ಹಲವು ಹಡಗುಗಳು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದವು. ಸಮುದ್ರಕ್ಕೆ ಹಾರಿದ ಪ್ರಯಾಣಿಕರನ್ನು ಈ ಹಡಗುಗಳ ಸಿಬ್ಬಂದಿ ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುತ್ತಿದ್ದಾರೆ. ಪ್ರಸ್ತುತ ನಾಲ್ಕು ಹಡಗುಗಳು ಘಟನಾ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಸುರಬಯಾ ಶೋಧ ಮತ್ತು ರಕ್ಷಣಾ ಕಚೇರಿಯ ಮುಖ್ಯಸ್ಥ ನಾನಂಗ್ ಸಿಗಿಟ್ ತಿಳಿಸಿದ್ದಾರೆ.
ಎಸ್ಎಆರ್-249 ಪೆರ್ಮಾಡಿ ರಕ್ಷಣಾ ಹಡಗು ಸಹ ಘಟನಾ ಸ್ಥಳದತ್ತ ತೆರಳಿದ್ದು, ಅಲ್ಲಿಗೆ ತಲುಪಲು ಸುಮಾರು ಆರು ಗಂಟೆ ಬೇಕಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ದೋಣಿಯಿಂದ ದಟ್ಟ ಕಪ್ಪು ಹೊಗೆ ಹೊರಬರುತ್ತಿರುವುದು, ಲೈಫ್ ಜಾಕೆಟ್ ಧರಿಸಿದ ಪ್ರಯಾಣಿಕರು ದೋಣಿಯ ಒಂದು ಬದಿಯಲ್ಲಿ ಗುಂಪುಗೂಡಿರುವುದು ಹಾಗೂ ಕೆಲವರು ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರುತ್ತಿರುವ ದೃಶ್ಯಗಳು ಕಂಡುಬಂದಿವೆ.
ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ. ನಾಪತ್ತೆಯಾದ 41 ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಅವಘಡದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

