ಜಗದಲ್ಪುರ: ಛತ್ತೀಸಗಢದ ಬಸ್ತಾರ್ ಜಿಲ್ಲೆಯ ಎನ್ಐಎ ಪ್ರಕರಣಗಳ ವಿಶೇಷ ನ್ಯಾಯಾಲಯವು 2013ರ ಝೀರಮ್ ಕಣಿವೆಯ ನಕ್ಸಲ್ ದಾಳಿ ಪ್ರಕರಣದ ಎಲ್ಲ 10 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಬುಧವಾರ ತೀರ್ಮಾನ ಪ್ರಕಟಿಸಿದೆ.
ಎನ್ಐಎನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಸಿಂಗ್ ರಜಪೂತ್ ಅವರು ಇಬ್ಬರು ಮಹಿಳೆಯರು ಸೇರಿದಂತೆ 10 ಮಂದಿಯನ್ನು ದೋಷಿಗಳು ಎಂದು ಘೋಷಿಸಿ ಸೆಪ್ಟೆಂಬರ್ 5ರಂದು ತೀರ್ಪು ನೀಡಿದ್ದರು. ಶಿಕ್ಷೆಯ ಪ್ರಮಾಣವನ್ನು ಸೆ.16ಕ್ಕೆ ಕಾಯ್ದಿರಿಸಲಾಗಿತ್ತು.
'ಝೀರಮ್ ಘಾಟಿ ದಾಳಿಗೆ ಸಂಬಂಧಿಸಿ ಒಟ್ಟು 11 ಜನರನ್ನು ಬಂಧಿಸಲಾಯಿತು. ಇವರಲ್ಲಿ ಒಬ್ಬರು ವಿಚಾರಣೆಯ ಸಮಯದಲ್ಲಿ ನಿಧನರಾದರು. ಉಳಿದ ಎಲ್ಲ 10 ಅಪರಾಧಿಗಳಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ವಿಚಾರಣೆಯ ವೇಳೆ, 101 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ' ಎಂದು ಎನ್ಐಎ ಪರ ವಕೀಲ ದಿನೇಶ್ ಪಾಣಿಗ್ರಾಹಿ ಸುದ್ದಿಗಾರರಿಗೆ ತಿಳಿಸಿದರು.
ಘಟನೆ ಹಿನ್ನೆಲೆ: 2013ರ ಮೇ 25ರಂದು ಬಸ್ತರ್ ದರ್ಬಾ ಪೊಲೀಸ್ ಠಾಣೆ ವ್ಯಾಪ್ತಿಯ ಝೀರಮ್ ಕಣಿವೆಯಲ್ಲಿ ನಕ್ಸರು ಕಾಂಗ್ರೆಸ್ ಮುಖಂಡರ ಮತ್ತು ಬೆಂಗಾವಲು ಪಡೆ ವಾಹನಗಳ ಮೇಲೆ ನಡೆಸಿದ ಗ್ರೆನೇಡ್ ದಾಳಿಯಲ್ಲಿ ಛತ್ತೀಸಗಢ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಂದಕುಮಾರ್ ಪಟೇಲ್, ಅವರ ಪುತ್ರ ದಿನೇಶ್, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಮಹೇಂದ್ರ ಕರ್ಮಾ, ಮಾಜಿ ವಿದೇಶಾಂಗ ಸಚಿವ ವಿದ್ಯಾ ಚರಣ್ ಶುಕ್ಲಾ, ಮಾಜಿ ಶಾಸಕ ಉದಯ್ ಮುದಲಿಯಾರ್ ಸೇರಿದಂತೆ 29 ಮಂದಿ ಮೃತಪಟ್ಟಿದ್ದರು. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಹಮ್ಮಿಕೊಂಡಿದ್ದ 'ಪರಿವರ್ತನಾ ರ್ಯಾಲಿ' ಮುಗಿಸಿಕೊಂಡು ಬರುವಾಗ ಈ ದಾಳಿ ನಡೆದಿತ್ತು. ಝೀರಮ್ ದಾಳಿಯಲ್ಲಿ ಛತ್ತೀಸಗಢದ ಕಾಂಗ್ರೆಸ್ ಘಟಕವು ಬಹುಪಾಲು ಸದಸ್ಯರನ್ನು ಕಳೆದುಕೊಂಡಿತ್ತು.
ಈ ದಾಳಿ ನಡೆದ ಎರಡು ದಿನಗಳಲ್ಲೇ ರಮಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವು ತನಿಖೆಯನ್ನು ಎನ್ಐಎಗೆ ವಹಿಸಿತ್ತು. ಅಂದಿನ ಛತ್ತೀಸಗಢ ಹೈಕೋರ್ಟ್ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ರಾಜ್ಯ ಸರ್ಕಾರ ತನಿಖೆಗಾಗಿ ನ್ಯಾಯಾಂಗ ಆಯೋಗವನ್ನು ರಚಿಸಿತ್ತು.
ಮರಣದಂಡನೆ ಶಿಕ್ಷೆಗೆ ಒಳಗಾದವರು
ಪ್ರಮೀಳಾ ಮೊದಿಯಂ (40) ಚೈತು ಲೇಕಂ ಸುಮಿತ್ರಾ ಪೂನಂ ಮೊದಿಯಂ ಮುಕ್ಕ ಮಾಂಡವಿ ಕೊಸಾ ಕವಾಸಿ ಆಯತ ಮರ್ಕಂ ಮಡ್ಕಮಿ ದೇವಾ ಜೋಗಾ ಮಡ್ಕಮಿ ಬಂಜಮಿ ಸನ್ನಾ ಮತ್ತು ಮಹದೇವ್ ನಾಗ್.
-ಅರವಿಂದ್ ಚೌಧರಿ, ಪ್ರತಿವಾದಿ ವಕೀಲಎನ್ಐಎ ಪ್ರಕರಣಗಳ ವಿಶೇಷ ನ್ಯಾಯಾಲಯದ ತೀರ್ಪಿನಿಂದ ನಾವು ತೃಪ್ತರಾಗಿಲ್ಲ ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ.

