ಇಸ್ಲಾಮಾಬಾದ್: ಯುದ್ಧನೌಕೆಗಳ ಡಿಕ್ಕಿ ಪ್ರಕರಣ ಸಂಬಂಧ ಇಸ್ಲಾಮಾಬಾದ್ನಲ್ಲಿರುವ ಭಾರತದ ಪ್ರಭಾರ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿ ಪಾಕಿಸ್ತಾನ ಬುಧವಾರ ಪ್ರತಿಭಟನೆ ದಾಖಲಿಸಿದೆ.
ಅರಬ್ಬಿ ಸಮುದ್ರದ ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಭಾರತ ಹಾಗೂ ಪಾಕಿಸ್ತಾನದ ಯುದ್ಧ ಹಡಗುಗಳು ಡಿಕ್ಕಿಯಾಗಿದ್ದವು.
ಘಟನೆ ಬೆನ್ನಲ್ಲೇ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ನ ಪ್ರಭಾರ ರಾಜತಾಂತ್ರಿಕ ಅಧಿಕಾರಿ ಸಾದ್ ವಾರುಯಿಚ್ ಅವರನ್ನು ಕರೆಸಿ, ಡಿಕ್ಕಿಗೆ ಕಾರಣವಾದ ಪಾಕಿಸ್ತಾನ ನೌಕಾಪಡೆಯ ಹಡಗಿನದ್ದು ಸ್ವೀಕಾರಾರ್ಹವಲ್ಲದ ನಡೆ ಎಂದು ತೀವ್ರ ಪ್ರತಿಭಟನೆ ದಾಖಲಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನದಿಂದಲೂ ಅದೇ ಬಗೆಯ ನಡೆ ವ್ಯಕ್ತವಾಗಿದೆ.
ಸೆ.15ರಂದು ಪಾಕಿಸ್ತಾನದ ವಿಶೇಷ ಆರ್ಥಿಕ ವಲಯದಲ್ಲಿ ಭಾರತದ ನೌಕಾಪಡೆಯ ಹಡಗು 'ಅತ್ಯಂತ ಪ್ರಚೋದನಕಾರಿ ಮತ್ತು ಸ್ವೀಕಾರಾರ್ಹವಲ್ಲದ' ರೀತಿಯಲ್ಲಿ ವರ್ತಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ನೌಕಾಪಡೆಯು ದ್ವೈವಾರ್ಷಿಕ 'ಸೀಸ್ಪಾರ್ಕ್-26' ಸಮರಾಭ್ಯಾಸ ನಡೆಸುತ್ತಿದ್ದ ವೇಳೆ ಈ ಘಟನೆ ಜರುಗಿದೆ. ಭಾರತದ ನೌಕೆಯು ಪಾಕಿಸ್ತಾನದ ನೌಕೆಯ ಅತ್ಯಂತ ಸಮೀಪದಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಿಸಿದ್ದರಿಂದ ಎರಡೂ ಹಡಗುಗಳು ಪರಸ್ಪರ ಡಿಕ್ಕಿಯಾಗಿವೆ ಎಂದು ಪಾಕಿಸ್ತಾನ ಹೇಳಿದೆ.
ಈ ಘಟನೆ ಅಂತರರಾಷ್ಟ್ರೀಯ ಕಾನೂನು ಹಾಗೂ 1991ರ ಭಾರತ-ಪಾಕಿಸ್ತಾನ ನಡುವಿನ ಸೇನಾ ಸಮರಾಭ್ಯಾಸ ಮತ್ತು ಸೈನಿಕ ಚಲನವಲನಗಳ ಕುರಿತು ಮುಂಗಡ ಮಾಹಿತಿ ನೀಡುವ ಒಪ್ಪಂದದ ಗಂಭೀರ ಉಲ್ಲಂಘನೆಯಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿದೆ. ಇದರಿಂದ ಪ್ರದೇಶದಲ್ಲಿ ಸಂಘರ್ಷ ಹೆಚ್ಚುವ ಸಾಧ್ಯತೆಯೂ ಇದೆ ಎಂದು ತಿಳಿಸಿದೆ.
ಭಾರತದ ನಡವಳಿಕೆಯನ್ನು ಪಾಕಿಸ್ತಾನ ತೀವ್ರವಾಗಿ ವಿರೋಧಿಸುತ್ತದೆ ಎಂಬ ಸಂದೇಶವನ್ನು ಭಾರತ ಸರ್ಕಾರಕ್ಕೆ ತಲುಪಿಸುವಂತೆ ಪ್ರಭಾರ ರಾಜತಾಂತ್ರಿಕ ಅಧಿಕಾರಿಗೆ ಸೂಚಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಮುದ್ರದಲ್ಲಿ ಇಂತಹ ಘಟನೆಗಳನ್ನು ತಡೆಯುವ ಉದ್ದೇಶದ ಅಂತರರಾಷ್ಟ್ರೀಯ ಕಾನೂನು ಮತ್ತು ದ್ವಿಪಕ್ಷೀಯ ಒಪ್ಪಂದಗಳನ್ನು ಭಾರತ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪಾಕಿಸ್ತಾನ ಒತ್ತಾಯಿಸಿದೆ.

