ಹೈದರಾಬಾದ್: 2019ರಿಂದ 2024ರವರೆಗೆ ತಿರುಮಲ ತಿರುಪತಿ ದೇಗುಲಕ್ಕೆ ₹230 ಕೋಟಿ ಮೌಲ್ಯದ ಕಲಬೆರಕೆ ತುಪ್ಪ ಪೂರೈಕೆಯಾಗಿರುವುದು ಜಾರಿ ನಿರ್ದೇಶನಾಲಯದ(ಇ.ಡಿ) ತನಿಖೆಯಲ್ಲಿ ಪತ್ತೆಯಾಗಿದೆ.
ತಿರುಪತಿ ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಇ.ಡಿ ತನಿಖೆ ನಡೆಸುತ್ತಿದೆ.
ದೇಗುಲದ ಆಡಳಿತ ಮಂಡಳಿ ಟಿಟಿಡಿಗೆ ₹96 ಕೋಟಿ ಮೌಲ್ಯದ ಕಲಬೆರಕೆ ತುಪ್ಪ ಪೂರೈಸಿದ್ದ ದೆಹಲಿ ಮೂಲದ ಉದ್ಯಮಿ ಕೈಲಾಶ್ ಚಂದ್ ಮಂಗಳ ಅವರನ್ನು ಇ.ಡಿ ಗುರುವಾರ ಬಂಧಿಸಿದೆ.
ಸಂಸ್ಕರಿಸಿದ ತಾಳೆ ಎಣ್ಣೆ, ತಾಳೆ ಬೀಜದ ಎಣ್ಣೆ, ಪಾಮೋಲಿನ್ ಹಾಗೂ ಎಂ.ಜಿ-90, ಮಿವಾಸೆಟ್ ಸಾಫ್ಟ್ 400, ಅಸೆಟಿಕ್ ಆಯಸಿಡ್ ಸೇರಿದಂತೆ ಹಲವು ರಾಸಾಯನಿಕಗಳನ್ನು ಬಳಸಿ ತುಪ್ಪವನ್ನು ತಯಾರಿಸಲಾಗುತ್ತಿತ್ತು. ಅಗ್ಮಾರ್ಕ್ ವಿಶೇಷ ದರ್ಜೆಯ ಹಸುವಿನ ತುಪ್ಪದ ಹೆಸರಿನಲ್ಲಿ ಅದನ್ನು ಟಿಟಿಡಿಗೆ ಪೂರೈಕೆ ಮಾಡಲಾಗುತ್ತಿತ್ತು ಎಂದು ಇ.ಡಿ ಆರೋಪಿಸಿದೆ.
ಕೈಲಾಶ್ ಅವರು ಸುಕೃತಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ನ ಪ್ರವರ್ತಕರಾಗಿದ್ದು, ಅವರು ತಮ್ಮ ಕಾರ್ಖಾನೆಯಲ್ಲಿ ಕಲಬೆರಕೆ ತುಪ್ಪವನ್ನು ತಯಾರಿಸುತ್ತಿದ್ದರು ಮತ್ತು ಅದನ್ನು ವಿವಿಧ ಡೇರಿ ಉತ್ಪನ್ನ ಮಾರಾಟ ಸಂಸ್ಥೆಗಳ ಮೂಲಕ ಪೂರೈಸುತ್ತಿದ್ದರು ಎಂದು ಇ.ಡಿ ಆರೋಪಿಸಿದೆ.

