ಕಾಸರಗೋಡು: ಕೇರಳ ಸ್ಟೇಟ್ ಮೀಡಿಯೇಷನ್ ಆ್ಯಂಡ್ ಕನ್ಸಿಲಿಯೇಷನ್ ಸೆಂಟರ್ನ ಆಶ್ರಯದಲ್ಲಿ ‘ಮೀಡಿಯೇಷನ್ ಫಾರ್ ದಿ ನೇಷನ್ 3.0’ ಮಧ್ಯಸ್ಥಿಕೆ ಕಾರ್ಯಕ್ರಮವನ್ನು ಅಕ್ಟೋಬರ್ 1ರಿಂದ ಡಿಸೆಂಬರ್ 31ರವರೆಗೆ ಆಯೋಜಿಸಲಾಗುತ್ತದೆ.
ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಹಾಗೂ ರಾಜಿ ಮೂಲಕ ಪರಿಹರಿಸಬಹುದಾದ ಪ್ರಕರಣಗಳನ್ನು ಗುರುತಿಸಿ, ಸಂಬಂಧಪಟ್ಟ ಕಕ್ಷಿಗಾರರ ಸಮ್ಮತಿಯೊಂದಿಗೆ ಮಧ್ಯಸ್ಥಿಕೆಗಾಗಿ ಮೀಡಿಯೇಷನ್ ಸೆಂಟರ್ಗೆ ರೆಫರ್ ಮಾಡಲಾಗುತ್ತದೆ. ತರಬೇತಿ ಪಡೆದ ಮಧ್ಯಸ್ಥರ ಸಹಾಯದಿಂದ ಕಕ್ಷಿಗಾರರ ನಡುವಿನ ವಿವಾದಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಮಧ್ಯಸ್ಥಿಕೆಗೆ ಸಂಬಂಧಿಸಿದ ಮಾಹಿತಿ ಸಂಬಂಧಪಟ್ಟ ನ್ಯಾಯಾಲಯ ಅಥವಾ ಮೀಡಿಯೇಷನ್ ಸೆಂಟರ್ನಿಂದ ಪ್ರಕರಣದ ಕಕ್ಷಿಗಾರನಿಗೆ ನೀಡಲಾಗುತ್ತದೆ. ನೋಟಿಸ್ ಲಭಿಸಿದವರು ಸೂಚಿಸಿದ ದಿನಾಂಕ ಮತ್ತು ಸಮಯಕ್ಕೆ ಸಂಬಂಧಪಟ್ಟ ಮೀಡಿಯೇಷನ್ ಸೆಂಟರ್ಗೆ ಹಾಜರಾಗಿ ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಸಹಕರಿಸಬೇಕು.
ಕುಟುಂಬ ಕಲಹ, ಆಸ್ತಿ ವಿವಾದ, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ವಿವಾದ, ಒಪ್ಪಂದ ಹಾಗೂ ವಾಣಿಜ್ಯ ವಿವಾದ, ವಾಹನ ಅಪಘಾತ ಪರಿಹಾರ ಪ್ರಕರಣ, ನೆರೆಹೊರೆಯವರ ನಡುವಿನ ವಿವಾದ, ಕೆಲವು ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳು ಮತ್ತು ಗ್ರಾಹಕ ವಿವಾದಗಳನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸಬಹುದು.
ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಇಂತಹ ಪ್ರಕರಣಗಳ ಕಕ್ಷಿಗಾರರು ಪರಸ್ಪರ ಸಮ್ಮತಿಯೊಂದಿಗೆ ವಿವಾದಗಳನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸಲು ಸಂಬಂಧಪಟ್ಟ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪ್ರಕರಣವನ್ನು ಮೀಡಿಯೇಷನ್ಗೆ ರೆಫರ್ ಮಾಡುವ ಅವಕಾಶವನ್ನು ಬಳಸಿಕೊಳ್ಳಬಹುದು.
ಮಧ್ಯಸ್ಥಿಕೆಯ ಮೂಲಕ ವಿವಾದಗಳನ್ನು ಉಚಿತವಾಗಿ, ತ್ವರಿತವಾಗಿ ಹಾಗೂ ಸೌಹಾರ್ದಯುತವಾಗಿ ಪರಿಹರಿಸುವುದು ಮತ್ತು ನ್ಯಾಯಾಲಯಗಳಲ್ಲಿನ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡುವುದು ‘ಮೀಡಿಯೇಷನ್ ಫಾರ್ ದಿ ನೇಷನ್ 3.0’ ಕಾರ್ಯಕ್ರಮದ ಉದ್ದೇಶವಾಗಿದೆ.

