ಕಾಸರಗೋಡು: ಜಿಲ್ಲೆಯ ಪನತ್ತಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ಅರಣ್ಯ ಇಲಾಖೆ ಸಿಬ್ಬಂದಿ ಒಬ್ಬ ಆರೋಪಿಯನ್ನುಬಂಧಿಸಿದ್ದಾರೆ. ಪನತ್ತಡಿ ಪಂಚಾಯತ್ ವ್ಯಾಪ್ತಿಯ ಎಂ.ಎಚ್. ಸಿದ್ದೀಖ್ (50) ಬಂಧಿತ.
ಪನತ್ತಡಿ ಕಾಟೂರುಕೂಪ್ ಪ್ರದೇಶದಲ್ಲಿ ವನ್ಯಜೀವಿ ಬೇಟೆ ನಡೆಯುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯನ್ವಯ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಸಿದ್ದೀಕ್ನ ಬಂಧನವಾಗಿದೆ. ವನ್ಯಜೀವಿಗಳ ಬೇಟೆಯಾಡುವವರನ್ನು ಪತ್ತೆಹಚ್ಚಲು ಈ ಪ್ರದೇಶದಲ್ಲಿ ಅರಣ್ಯ ಇಲಾಖೆ ತಪಾಸಣೆಯನ್ನು ತೀವ್ರಗೊಳಿಸಿತ್ತು.
ಕಾಸರಗೋಡ್ ರೇಂಜ್ ಫಾರೆಸ್ಟ್ ಆಫೀಸರ್ ಕೆ. ರಾಹುಲ್ ನಿರ್ದೇಶನದ ಮೇರೆಗೆ ಪನತ್ತಡಿ ಸೆಕ್ಷನ್ ಫಾರೆಸ್ಟ್ ಆಫೀಸರ್ ಎಂ.ಪಿ. ರಾಜು ಅವರ ನೇತೃತ್ವದ ಅರಣ್ಯ ಇಲಾಖೆ ತಂಡ ಗುರುವಾರ ಕಾಟೂರು ಕೂಪ್ ಪ್ರದೇಶಕ್ಕೆ ತೆರಳಿದ್ದು, ತಪಾಸಣೆ ವೇಳೆ ದೊಡ್ಡ ಚೀಲದಲ್ಲಿ ಮಾಂಸದೊಂದಿಗೆ ಮೂರು ಮಂದಿಸಂಚರಿಸುತ್ತಿರುವುದನ್ನು ಅರಣ್ಯ ಇಲಾಖೆ ತಂಡ ಪತ್ತೆಹಚ್ಚಿದೆ. ಅಧಿಕಾರಿಗಳನ್ನು ಕಂಡ ತಕ್ಷಣ ಮೂವರೂ ಓಡಿ ಪರಾರಿಯಾಗಲೆತ್ನಿಸಿದ್ದು, ಈ ಮಧ್ಯೆ ಸಿದ್ದೀಖ್ನನ್ನು ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ತಂಡದಲ್ಲಿದ್ದ ನೌಫಲ್ ಮತ್ತು ಸುಬ್ಬೀರ್ ಪರಾರಿಯಾಗಿದ್ದಾರೆ. ಸಿದ್ದೀಖ್ನಿಂದ ಸುಮಾರು 40 ಕೆ.ಜಿ. ತೂಕದ ಜಿಂಕೆಯ ಮಾಂಸ, ಬೇಟೆಗೆ ಬಳಸಿದ್ದರೆನ್ನಲಾದ ಒಂದು ಬಂದೂಕು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಂಸ ಮಾಡಿದ ಸ್ಥಳದಿಂದ ಜಿಂಕೆಯ ತಲೆ ಮತ್ತು ದೇಹದ ಇತರ ಭಾಗಗಳನ್ನೂ ಅರಣ್ಯ ಇಲಾಖೆ ಪತ್ತೆಹಚ್ಚಿದೆ.ಬಂಧಿತ ಸಿದ್ದೀಖ್ ಸೇರಿದಂತೆ ಪರಾರಿಯಾಗಿರುವ ನೌಫಲ್ ಮತ್ತು ಸುಬ್ಬೀರ್ ಈ ಹಿಂದೆಯೂ ಕಾಡುಪ್ರಾಣಿಗಳ ಬೇಟೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪರಾರಿಯಾಗಿರುವ ನೌಫಲ್ ಮತ್ತು ಸುಬ್ಬೀರ್ಗಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ಮುಂದುವರಿಸಿದರೆ.

