ನವದೆಹಲಿ: ಆರನೇ ತರಗತಿ ವಿದ್ಯಾರ್ಥಿಗಳಿಗೆ ಹೊಸದಾಗಿ ಪರಿಚಯಿಸಲಾದ 'ತ್ರಿಭಾಷಾ' ಕಡ್ಡಾಯ ನಿಯಮದ ಜಾರಿ ವಿಷಯದಲ್ಲಿ ಒಮ್ಮೆಗೆ ಮಾತ್ರ ವಿನಾಯಿತಿ ನೀಡುವುದನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್ಇ) ಹೇಳಿದೆ.
ಈ ನೀತಿಯು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಮಕ್ಕಳು ಮತ್ತು ಪೋಷಕರಿಗೆ ಅನಿರೀಕ್ಷಿತ ಬದಲಾವಣೆಯಾಗಿ ಪರಿಣಮಿಸಬಾರದು ಎಂದು ನ್ಯಾಯಾಲಯ ಒತ್ತಿಹೇಳಿದೆ.
ಸಿಬಿಎಸ್ಇಯ ತ್ರಿಭಾಷಾ ನೀತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಕುರಿತು ಸೂಚನೆ ನೀಡಿದೆ.
2027ರಿಂದ ಜಾರಿಗೆ ತರಬಹುದು: ಪ್ರಸ್ತುತ ಆರನೇ ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ಈ ವಿನಾಯಿತಿ ಅನ್ವಯಿಸಬಹುದು ಎಂದ ಪೀಠ, 2027ರ ಶೈಕ್ಷಣಿಕ ವರ್ಷದಲ್ಲಿ ಆರನೇ ತರಗತಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪರಿಷ್ಕೃತ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬಹುದು ಎಂದು ಸಲಹೆ ನೀಡಿದೆ.
ಈ ರೀತಿಯ ಕ್ರಮವು ತ್ರಿಭಾಷಾ ನೀತಿಯ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿದಾರರ ಕಾನೂನುಬದ್ಧ ವಾದಗಳಿಗೆ ಧಕ್ಕೆ ತರುವುದಿಲ್ಲ ಎಂದೂ ಅದು ಸ್ಪಷ್ಟಪಡಿಸಿದೆ.
'ಮುಂದಿನ ವರ್ಷದಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಈ ನೀತಿಯನ್ನು ಜಾರಿಗೆ ತರಬಹುದು. ಅಷ್ಟಕ್ಕೂ 2020ರಲ್ಲಿ ರೂಪಿಸಲಾದ ಈ ಕುರಿತ ನೀತಿಯನ್ನು 2026ರಲ್ಲಿ ಜಾರಿಗೆ ತರಲಾಗಿದೆ. ಅದನ್ನು 2027ನೇ ಸಾಲಿನಿಂದ ಜಾರಿಗೆ ತರುವಂತೆ ನಾವು ಹೇಳುತ್ತಿದ್ದೇವೆ. ಇದರಿಂದ ಎಲ್ಲರಿಗೂ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ, ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಿ' ಎಂದು ಪೀಠ ಹೇಳಿದೆ.
ನಿಲುವು ಮರುಪರಿಶೀಲಿಸಿ: ವಿದ್ಯಾರ್ಥಿಗಳ ಅನುಕೂಲ ಮತ್ತು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹೊಸ ನೀತಿ ಜಾರಿಗೆ ತರುವಲ್ಲಿ ಪ್ರಾಯೋಗಿಕವಾಗಿ ಆಗುವ ತೊಂದರೆಗಳನ್ನು ಗಮನದಲ್ಲಿ ಇಟ್ಟುಕೊಂಡು ಮಂಡಳಿ ತನ್ನ ನಿಲುವನ್ನು ಮರು ಪರಿಶೀಲಿಸಬೇಕು ಎಂದು ಸಿಬಿಎಸ್ಇಯನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರಿಗೆ ನ್ಯಾಯಪೀಠ ಸೂಚಿಸಿದೆ.
ಅಲ್ಲದೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸ್ವಯಂ ಪ್ರೇರಣೆಯಿಂದ ತ್ರಿಭಾಷಾ ನೀತಿಯನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಉತ್ತೇಜಕ ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ಮಂಡಳಿ ಪರಿಗಣಿಸಬಹುದು ಎಂದು ಅದು ಹೇಳಿದೆ.
ಅದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯ ಭಾಟಿ ಅವರು, ನ್ಯಾಯಪೀಠದ ಸಲಹೆ ಮತ್ತು ಅಭಿಪ್ರಾಯಗಳನ್ನು ಮಂಡಳಿಗೆ ತಿಳಿಸಿ ಸೂಕ್ತ ಸೂಚನೆಗಳೊಂದಿಗೆ ಮರು ಹಾಜರಾಗುವುದಾಗಿ ತಿಳಿಸಿದರು.
ಈಗಾಗಲೇ ಮಂಡಳಿಯು 7,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿಯಿಂದ ವಿನಾಯಿತಿ ನೀಡಿದೆ. ಈ ನೀತಿ ಅಡಿಯಲ್ಲಿ ಕನಿಷ್ಠ ಎರಡು ಭಾರತೀಯ ಭಾಷೆಗಳನ್ನು ವಿದ್ಯಾರ್ಥಿಗಳು ಓದಬೇಕು. ಆದರೆ ಎರಡು ವಿದೇಶಿ ಭಾಷೆಗಳು ಮತ್ತು ಒಂದು ಭಾರತೀಯ ಭಾಷೆ ಕಲಿಕೆಯನ್ನು ಮುಂದುವರಿಸಬಹುದು ಹಾಗೂ ಮೂರನೇ ಭಾಷೆಯ ಮೌಲ್ಯಮಾಪನವನ್ನು ಮಂಡಳಿ ಪರೀಕ್ಷೆಯ ಬದಲಿಗೆ ಶಾಲಾ ಮಟ್ಟದಲ್ಲೇ ನಡೆಸಬಹುದು ಎಂದು ಸಿಬಿಎಸ್ಇ ಈ ಹಿಂದೆ ಹೇಳಿದೆ.

