ಕಠ್ಮಂಡು (PTI): ಪ್ರವಾಹ ಬಾಧಿತ ನೇಪಾಳದಲ್ಲಿ ಪ್ರಮುಖ ರಸ್ತೆ ಮಾರ್ಗಗಳ ಮರು ನಿರ್ಮಾಣ ಕಾರ್ಯವನ್ನು ಸರ್ಕಾರವು ತ್ವರಿತಗೊಳಿಸಿದೆ.
ಸಂಪರ್ಕ ಕಳೆದುಕೊಂಡ ಸ್ಥಳಗಳಿಗೆ ತಲುಪುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಭಾರತ ಮತ್ತು ಚೀನಾ ದೇಶಗಳಿಂದ ತಾತ್ಕಾಲಿಕ ಸೇತುವೆಗಳಿಗೆ ನೇಪಾಳ ಬೇಡಿಕೆ ಸಲ್ಲಿಸಿದೆ. ಇದಕ್ಕೆ ಎರಡೂ ದೇಶಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ.
'ಚೀನಾ ಈಗಾಗಲೇ 100 ಮೀಟರ್ ಉದ್ದದ ಎರಡು ತಾತ್ಕಾಲಿಕ ಸೇತುವೆಗಳನ್ನು ರವಾನಿಸಿದೆ' ಎಂದು ಮಾಧ್ಯಮಗಳು ವರದಿ ಮಾಡಿವೆ.
'41 ಸೇತುವೆಗಳು ಸಂಪೂರ್ಣ ನಾಶವಾಗಿದ್ದು, 4 ಸೇತುವೆಗಳಿಗೆ ಭಾಗಶಃ ಹಾನಿಯಾಗಿದೆ. ಅಂದಾಜು ₹ 1,877 ಕೋಟಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದ್ದು, ಅವುಗಳ ಮರುನಿರ್ಮಾಣಕ್ಕೆ ₹ 3,129 ಕೋಟಿ ಬೇಕಿದೆ' ಎಂದು ತಿಳಿಸಿವೆ.
ಮೃತರ ಸಂಖ್ಯೆ 1,357ಕ್ಕೆ ಏರಿಕೆ: ಪ್ರವಾಹಲ್ಲಿ ಮೃತರಾದವರ ಸಂಖ್ಯೆ ಮಂಗಳವಾರ 1,357ಕ್ಕೆ ತಲುಪಿದೆ.
'ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದು, 5,326 ಜನರಿಗಾಗಿ ಶೋಧ ನಡೆದಿದೆ. ಈವರೆಗೆ 13,583 ಜನರನ್ನು ರಕ್ಷಿಸಲಾಗಿದೆ. ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ 121 ಜನರು ಸಿಲುಕಿರುವ ಅಂದಾಜಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈವರೆಗೆ ಗುರುತು ಪತ್ತೆ ಮಾಡಲಾದ 102 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

