ಕಾಸರಗೋಡು: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ 6ನೇ ವಾರ್ಷಿಕ ಆರಾಧನಾ ಮಹೋತ್ಸವ ಮಂಗಳವಾರ ನಡೆಯಿತು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀಮಠದಲ್ಲಿ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ ನಡೆದ ಸಮಾರಂಭದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಧ್ವಜಾರೋಹಣ ನಡೆಸಿದರು. ಮಹಾಪೂಜೆ, ಭಜನೆ, ಧ್ವಜಾರೋಹಣ ಹಾಗೂ ಅಖಿಲ ಭಾರತೀಯ ಕುಟುಂಬ ಪ್ರಬೋಧಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟರಿಂದ ಆಶಯ ಭಾಷಣ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಭಕ್ತಿಸಂಗೀತ, ಮಧ್ಯಾಹ್ನ ಮಹಾಪೂಜೆ, ವೃಂದಾವನ ಪೂಜೆ ಮತ್ತು ಮಂತ್ರಾಕ್ಷತೆ ನಡೆಯಿತು. ಮಧ್ಯಾಹ್ನ ಆರಾಧನೋತ್ಸವ ಮಹಾಸಭೆಯಲ್ಲಿ ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶಾಮ್ ಭಟ್ ಐಎಎಸ್ ಗೌರವ ಉಪಸ್ಥಿತರಿದ್ದರು. ವಯೋಲಿನ್ ವಾದಕ ವಿದ್ವಾನ್ ವಿರಳ ರಾಮಮೂರ್ತಿ ಅವರಿಂದ ಗುರುಸ್ಮರಣೆ ನಡೆಯಿತು. ಉದ್ಯಮಿ ಸುರೇಶ್ ಕೆ. ನಾಯಕ್ ಪುಣೆ ಅವರಿಗೆ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಗೌರವ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಸಂಗೀತ ಕಚೇರಿಯಲ್ಲಿ ವಿದ್ವಾನ್ ಡಾ. ಚೇರ್ತಲ ಕೆ.ಎನ್. ರಂಗನಾಥ ಶರ್ಮ ಅವರ ಹಾಡುಗಾರಿಕೆ ನಡೆಯಿತು. ವಯೋಲಿನ್ನಲ್ಲಿ ವಿದ್ವಾನ್ ವಿರಳ ರಾಮಮೂರ್ತಿ, ಮೃದಂಗದಲ್ಲಿ ವಿದ್ವಾನ್ ಬಿ. ಶಿವರಾಮನ್ ಹಾಗೂ ಘಟದಲ್ಲಿ ವಿದ್ವಾನ್ ಡಾ. ಸುರೇಶ್ ವೈದ್ಯನಾಥನ್ ಸಾಥ್ ನೀಡಿದರು.
ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತೆಂಕುತಿಟ್ಟು ಯಕ್ಷಗಾನ ಬಯಲಾಟ 'ಶ್ರೀಕೃಷ್ಣ ಜನ್ಮ ಸುಂದೋಪಸುಂದ' ಪ್ರದರ್ಶನಗೊಂಡಿತು.



