ಠಾಣೆ: ಮಹಾರಾಷ್ಟ್ರದ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಪ್ರಶ್ನೆಪತ್ರಿಕೆಗಳನ್ನು ಇಬ್ಬರು ನೌಕರರು ಶೂಗಳ ಒಳಪದರದಲ್ಲಿ (ಇನ್ಸೋಲ್) ಇಟ್ಟುಕೊಂಡು ಮುದ್ರಣಾಲಯದಿಂದ ಹೊರಕ್ಕೆ ಸಾಗಿಸಿದ್ದಾರೆ ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಭಿವಂಡಿ ನ್ಯಾಯಾಲಯಕ್ಕೆ ಸುಮಾರು 3,500 ಪುಟಗಳ ದೋಷಾರೋಪ ಪಟ್ಟಿಯನ್ನು ಶುಕ್ರವಾರ ಸಲ್ಲಿಸಿದ್ದು, ಈ ಹಿಂದೆ ಒಡಿಶಾದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾಗಿದ್ದ ಬಿಜೇಂದ್ರ ಗುಪ್ತಾ ಸೇರಿ 18 ಜನರನ್ನು ಅದರಲ್ಲಿ ಹೆಸರಿಸಲಾಗಿದೆ.
ಈ ಪೈಕಿ 16 ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ.
'ಇಬ್ಬರು ನೌಕರರು ಮತ್ತು ಮುದ್ರಣಾಲಯದ ಒಬ್ಬ ಮಾಜಿ ಸಿಬ್ಬಂದಿ ಸೇರಿ ಭದ್ರತಾ ತಪಾಸಣೆಯಿಂದ ಪಾರಾಗಲು ಶೂಗಳ ಒಳಪದರದಲ್ಲಿ ಪ್ರಶ್ನೆಪತ್ರಿಕೆ ಮಡಚಿ ಇಟ್ಟುಕೊಂಡು ಸಾಗಿಸಿದ್ದಾರೆ. ಪರಿಶೀಲನೆ ವೇಳೆ ಅವರ ಬಟ್ಟೆಗಳನ್ನು ತಪಾಸಣೆ ಮಾಡಲಾಗಿತ್ತಾದರೂ ಶೂಗಳ ಬಗ್ಗೆ ಗಮನ ಹರಿಸಿರಲಿಲ್ಲ' ಎಂದು ತಿಳಿಸಲಾಗಿದೆ.
'ಪರೀಕ್ಷೆಯ ಪಾವಿತ್ರ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ, ಎರಡು ವಿಷಯಗಳಿಗೂ ತಲಾ ನಾಲ್ಕು ಜೊತೆ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ, ಆರೋಪಿಗಳು ಎಲ್ಲ ಪತ್ರಿಕೆಗಳನ್ನೂ ಕಳ್ಳಸಾಗಣೆ ಮಾಡಿದ್ದರು. ಅವರಿಗೆ ಅಂದಾಜು ₹8 ಸಾವಿರ ಪಾವತಿಸಲಾಗಿತ್ತು ಹಾಗೂ ಪರೀಕ್ಷಾ ಸಾಮಗ್ರಿಗಳನ್ನು ಕಳವು ಮಾಡಿದರೆ ಆಗ್ರಾದಲ್ಲಿ ನಿವೇಶನ ಕೊಡುವುದಾಗಿ ಭರವಸೆ ನೀಡಲಾಗಿತ್ತು' ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ತನಿಖೆ ಮುಂದುವರಿದಂತೆ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

