ಕಾಸರಗೋಡು: ಕೇರಳ ಸರ್ಕಾರದ ನುರು ದಿನಗಳ ಕ್ರಿಯಾ ಯೋಜನೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ 'ಅಕ್ವಾಫಿಟ್' ಈಜು ತರಬೇತಿ ಕಾರ್ಯಕ್ರಮದ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ನೆರವೇರಿಸಿದರು. ಕಾಸರಗೋಡು ನಗರಸಭೆಯ ಉಪಾಧ್ಯಕ್ಷ ಕೆ.ಎಂ. ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಕೌನ್ಸಿಲರ್ ವಿದ್ಯಾಶ್ರೀ ಮತ್ತು ವಾರ್ಡ್ ಸದಸ್ಯ ಹನೀಫಾ, ಕ್ರೀಡಾ ಮಂಡಳಿಯ ತರಬೇತುದಾರ ಜಾಯ್ ಸಿರಿಯಾಕ್ ಮತ್ತು ಆಸಿಫ್ ಉಪಸ್ಥಿತರಿದ್ದರು.
ಜಿಲ್ಲಾ ಶಿಕ್ಷಣ ಉಪನಿರ್ದೇಶಕ ರಫೀಕ್ ಸ್ವಾಗತಿಸಿದರು. ತನ್ಬೀಹುಲ್ ಇಸ್ಲಾಂ ಶಾಲೆಯ ಎಸ್ಪಿಸಿ ಅಧಿಕಾರಿ ಇಲ್ಯಾಸ್ ವಂದಿಸಿದರು.
ರಾಜ್ಯವ್ಯಾಪಿ ನಡೆಯುವ ಈ ಯೋಜನೆಯ ಮೊದಲ ಹಂತವು, ಕೇರಳದಾದ್ಯಂತ 14,000 ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಈಜು ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದೆ. ಆರಂಭಿಕ ಹಂತದಲ್ಲಿ, ಪ್ರತಿ ಜಿಲ್ಲೆಯಿಂದ ಸಾವಿರ ಮಂದಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ವಿದ್ಯಾರ್ಥಿಗಳ ಶಾಲೆಗಳಿಂದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಸ್ಥಳದಲ್ಲಿ ಸೂಕ್ತ ಈಜುಕೊಳವನ್ನು ಗುರುತಿಸುವ ಮೂಲಕ ತರಬೇತಿಯನ್ನು ಒದಗಿಸಲಾಗುತ್ತದೆ. ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಇತರ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಯೋಜನೆಯನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈಜುವುದನ್ನು ಕಲಿಯುವುದು ಕೇವಲ ಕ್ರೀಡಾ ಕೌಶಲವಷ್ಟೇ ಅಲ್ಲ, ಬದಲಾಗಿ ಜೀವ ರಕ್ಷಕ ಕೌಶಲವೂ ಹೌದು ಎಂಬುದನ್ನು ಮನಗಂಡು, ವಿಶೇಷವಾಗಿ ರಾಜ್ಯದಲ್ಲಿರುವ ಹೇರಳವಾದ ಜಲಮೂಲಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಉಪಕ್ರಮ ಕೈಗೊಂಡಿದೆ.



