ಕಾಸರಗೋಡು: ಮನೆ ನಿರ್ಮಾಣ ಸಂದರ್ಭ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಕ್ಕೆ ಕೇಂದ್ರ ಸಚಿವ ಸುರೇಶ್ಗೋಪಿ ಆಸರೆಯಾಗಿದ್ದಾರೆ. ಕುಟುಂಬಕ್ಕೆ ಅಗತ್ಯ ಸಹಾಯ ಒದಗಿಸುವುದಾಗಿ ಸುರೇಶ್ಗೋಪಿ ಭರವಸೆ ನೀಡಿದ್ದಾರೆ.
ಕುತ್ತಿಕ್ಕೋಲ್ ಪಂಚಾಯಿತ್, ಕರಿವೆಡಗಂ ಗ್ರಾಮದ ಆನಕ್ಕಲ್ ಒಟ್ಟಮಾವುಂಗಲ್ ನಿವಾಸಿ ಕೆ. ಸದನ್ ಅವರು ಸುಮಾರು ರೂ.30 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಏಕ ಅಂತಸ್ತಿನ ಕಾಂಕ್ರೀಟ್ ಮನೆಯ ಕೆಳಭಾಗದಲ್ಲಿ ಭೂಕುಸಿತದಿಂದ ಭಾರಿ ಹೊಂಡ ನಿರ್ಮಾಣಗೊಂಡು ಮನೆ ಅಪಾಯದಂಚಿಗೆ ಸಿಲುಕಿತ್ತು.
ಮನೆಯ ಹಿಂಭಾಗದಲ್ಲಿ ಶೌಚಗೃಹದ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ಜೆಸಿಬಿ ಬಳಸಿ ಹೊಂಡ ಅಗೆಯುವ ಮಧ್ಯೆ ಮಣ್ಣು ಏಕಾಏಕಿ ಕುಸಿದು ಬೃಹತ್ ಹೊಂಡ ನಿರ್ಮಾಣವಾಗಿತ್ತು.
ಹೊಂಡಕ್ಕೆ ಮಣ್ಣು ತುಂಬಿ ಮುಚ್ಚಿದರೂ ಮತ್ತೆ ಕುಸಿದು ಗುಂಡಿಯ ಗಾತ್ರ ಹೆಚ್ಚಾಗಿದೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ಎಂ.ಎಲ್. ಅಶ್ವಿನಿ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ
ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಾಂತ್ವನ ನೀಡಿ, ಮನೆಯ ಪ್ರಸಕ್ತ ಪರಿಸ್ಥಿತಿಯನ್ನು ಕೇಂದ್ರ ಸಚಿವ ಸುರೇಶ್ ಗೋಪಿ ಅವರಿಗೆ ಇ-ಮೇಲ್ ಮೂಲಕ ಮನವರಿಕೆ ಮಾಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಸಚಿವರು ಕುಟುಂಬಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ.



