ಕಾಸರಗೋಡು: ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ(ಐಸಿಎಆರ್-ಸಿಪಿಸಿಆರ್ಐ)ಯಲ್ಲಿ "ಸ್ವಚ್ಛತಾ ಮೇ ಸಹಭಾಗ್, ಸ್ವಚ್ಛ ಭಾರತ, ವಿಕಸಿತ ಭಾರತ" ಎಂಬ ಧ್ಯೇಯವಾಕ್ಯದೊಂದಿಗೆ 'ಸ್ವಚ್ಛತಾ ಹೀ ಸೇವಾ' ಅಭಿಯಾನಕ್ಕೆ ಸಂಸ್ಥೆ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಅವರು ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಸ್ವಚ್ಛತೆಯು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ವೈಯಕ್ತಿಕ ಹಾಗೂ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಆರೋಗ್ಯಪೂರ್ಣ ಸಮಾಜದ ನಿರ್ಮಣ ಸಾಧ್ಯ ಎಂದು ತಿಳಿಸಿದರು. ಇದೇ ಸಂದರ್ಭ ಅಭಿಯಾನದನ್ವಯ ಹಮ್ಮಿಕೊಳ್ಳಲಾಗಿರುವ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಿಬ್ಬಂದಿಯನ್ನು ಉತ್ತೇಜಿಸಿದರು. ಈ ಸಂದರ್ಭ ಸಿಬ್ಬಂದಿಗೆ 'ಸ್ವಚ್ಛತಾ ಪ್ರತಿಜ್ಞೆ'ಬೋಧಿಸಿದರು.
ಎರಡು ವಾರಗಳ ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕಾಗಿ ಪ್ರಸ್ತಾಪಿಸಲಾದ ವಿವಿಧ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಸಂಸ್ಥೆಯ ಸುಮಾರು 150ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಸದಸ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ವಚ್ಛತಾ ಹಿ ಸೇವಾ ಅಭಿಯಾನದ ಹಿರಿಯ ವಿಜ್ಞಾನಿ ಮತ್ತು ನೋಡಲ್ ಅಧಿಕಾರಿ ಡಾ. ಪ್ರತಿಭಾ ಪಿ.ಎಸ್. ಸ್ವಾಗತಿಸಿದರು. ಸಹ-ನೋಡಲ್ ಅಧಿಕಾರಿ ಡಾ. ಶಿಲ್ಪಾ ಎಸ್ ಸೆಲ್ವನ್ ವಂದಿಸಿದರು.
ಕರ್ಯಖ್ರಮದ ಅಂಗವಾಗಿ ಸಂಸ್ಥೆಯ ಆವರಣದಿಂದ ಮೊಗ್ರಲ್ಪುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮೀಪದ 'ಚೌಕಿ' ಪ್ರದೇಶದವರೆಗೆ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.

