ಟೊರೊಂಟೊ: 'ಹಿಂದೂ' ಪದವನ್ನು ಯಾವುದೇ ಒಂದು ಭಾಷೆ, ಪೂಜಾ ವಿಧಾನ ಅಥವಾ ಜೀವನಶೈಲಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಈ ವ್ಯತ್ಯಾಸಗಳು ಮಾನವ ಸಮಾಜದಲ್ಲಿ ಸಹಜವಾಗಿರುವ ವಿವಿಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರತಿಪಾದಿಸಿದ್ದಾರೆ.
ಇಲ್ಲಿ 'ಹಿಂದೂ ವಿಶ್ವ ಬಂಧು:ವಿಶ್ವವನ್ನು ಸ್ನೇಹದಿಂದ ಅಪ್ಪಿಕೊಳ್ಳಿ' ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಹಿಂದೂಗಳು ಎಲ್ಲ ರೀತಿಯ ವಿವಿಧತೆಗಳನ್ನು ಗೌರವಿಸುತ್ತಾರೆ ಮತ್ತು ಸ್ವೀಕರಿಸುತ್ತಾರೆ. ಜಗತ್ತಿನ ಇತರ ಭಾಗಗಳಲ್ಲಿ ಕಿರುಕುಳಕ್ಕೊಳಗಾದ ಜನರಿಗೆ ಭಾರತವು ಐತಿಹಾಸಿಕವಾಗಿ ಆಶ್ರಯ ನೀಡಿದೆ ಮತ್ತು ಹೊರಗಿನಿಂದ ಆಕ್ರಮಣಕಾರರಾಗಿ ಬಂದವರನ್ನೂ ಸಹ ಭಾರತವು ಅಪ್ಪಿಕೊಂಡಿದೆ ಎಂದು ಹೇಳಿದರು.
ಹೊರಗಿನಿಂದ ಅನೇಕರು ಭಾರತಕ್ಕೆ ಆಕ್ರಮಣಕಾರರಾಗಿ ಬಂದರು, ಆದರೂ ಅವರು ತಮ್ಮೆಲ್ಲ ವಿಶೇಷತೆಗಳೊಂದಿಗೆ ಈಗಲೂ ಅಲ್ಲಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಅವರು ಈಗ ಭಾರತೀಯ ನಾಗರಿಕರು. ಅಲ್ಲಿ ಮುಸ್ಲಿಮರಿದ್ದಾರೆ, ಕ್ರಿಶ್ಚಿಯನ್ನರಿದ್ದಾರೆ, ಯಹೂದಿಗಳಿದ್ದಾರೆ, ಪಾರ್ಸಿಗಳಿದ್ದಾರೆ. ಅನೇಕ ಜನರು ಆಶ್ರಯಕ್ಕಾಗಿ ಭಾರತಕ್ಕೆ ಬರುತ್ತಾರೆ ಎಂದರು.
ಜಗತ್ತಿನಲ್ಲಿ ಎಲ್ಲಿಯೇ ಆಗಲಿ, ಕಿರುಕುಳವನ್ನು ಎದುರಿಸುತ್ತಿರುವವರಿಗೆ ಭಾರತವು ಸಾಂಪ್ರದಾಯಿಕವಾಗಿ ಆಶ್ರಯ ನೀಡುತ್ತ ಬಂದಿದೆ ಎಂದು ಅವರು ತಿಳಿಸಿದರು.
ದೇಶದ ನಾಗರಿಕತೆಯ ದೃಷ್ಟಿಕೋನದ ಕುರಿತು ವಿವರಿಸಿದ ಭಾಗವತ್, ''ವ್ಯತ್ಯಾಸಗಳ ನಡುವೆಯೂ ಏಕತೆಯನ್ನು ಗುರುತಿಸುವ ಪರಂಪರೆಯು ಭಾರತದ ಡಿಎನ್ಎಯಲ್ಲೇ ಇದೆ. ಇದು ನಮ್ಮ ಪರಂಪರೆ, ಭಾರತದ ಡಿಎನ್ಎ. ಅದಕ್ಕಾಗಿಯೇ ನೀವು 'ಹಿಂದೂಗಳು ಜಾಗೃತರಾದರೆ ಜಗತ್ತು ಜಾಗೃತಗೊಳ್ಳುತ್ತದೆ' ಎಂಬ ಮಾತನ್ನು ಕೇಳಿರಬಹುದು. ಅವರು ಜೀವಂತ ಮತ್ತು ನಿರ್ಜೀವ ಎರಡನ್ನೂ ತಮ್ಮದೇ ಎಂದು ಪರಿಗಣಿಸುತ್ತಾರೆ. ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಅವರಿಗೆ ಕಲಿಸಲಾಗಿದೆ. ಅದಕ್ಕಾಗಿಯೇ ಭಾರತದಲ್ಲಿ ವಿವಿಧತೆಯು ಎಂದಿಗೂ ಏಕತೆಗೆ ಸಮಸ್ಯೆಯಾಗುವುದಿಲ್ಲ; ವಿವಿಧತೆಯಲ್ಲಿ ಏಕತೆ ಮಾತ್ರವಲ್ಲ, ವಿವಿಧತೆಯೇ ಏಕತೆಯ ಒಂದು ರೂಪವಾಗಿದೆ ಎಂದು ನಮ್ಮ ಪರಂಪರೆ ನಮಗೆ ಬೋಧಿಸುತ್ತದೆ'' ಎಂದು ಹೇಳಿದರು.
ಮನುಷ್ಯರು ತಮ್ಮ ದೇಹ, ಆಕಾರ ಮತ್ತು ಮೈಬಣ್ಣದಲ್ಲಿ ಭಿನ್ನವಾಗಿರಬಹುದು, ಆದರೆ ಮೂಲತಃ ಎಲ್ಲರೂ ಒಂದೇ ಎಂದು ಹೇಳುವ ಮೂಲಕ ಭಾಗವತ್ 'ವಸುಧೈವ ಕುಟುಂಬಕಂ' ಪರಿಕಲ್ಪನೆಯನ್ನು ನೆನಪಿಸಿದರು. ಇತರರಿಗೆ ಸೇವೆ ಸಲ್ಲಿಸುವುದು ಒಂದು ಕರ್ತವ್ಯವಾಗಿದ್ದು, ಅದು ಶಾಶ್ವತ ಸಂತೋಷ ಮತ್ತು ತೃಪ್ತಿಯ ಮೂಲವಾಗಿದೆ ಎಂದರು.
ಸಹಾಯವನ್ನು ಕೇಳಿರಲಿ ಅಥವಾ ಕೇಳದೆಯೇ ಒದಗಿಸಿರಲಿ, ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುವ ದೀರ್ಘ ಪರಂಪರೆ ಭಾರತಕ್ಕಿದೆ ಎಂದು ಅವರು ಹೇಳಿದರು.
'ವಿಶ್ವಗುರು'ವಾಗಿ ಭಾರತದ ಏಳಿಗೆಯನ್ನು ಬಣ್ಣಿಸಿದ ಭಾಗವತ್, ಅದು ಸಾಂಪ್ರದಾಯಿಕ ಜಾಗತಿಕ ಶಕ್ತಿಯಾಗುವ ಮೂಲಕ ಆ ಸ್ಥಾನವನ್ನು ಪಡೆದಿರುವುದಲ್ಲ. ಯಾರಾದರೂ ಭಾರತವನ್ನು ಮಹಾಶಕ್ತಿ (ಸೂಪರ್ಪವರ್) ಎಂದು ಕರೆಯಬಹುದು, ಆದರೆ ಅದು ಮಹಾಶಕ್ತಿಯಲ್ಲ, ಅದು ಜಗತ್ತಿನ ಸೇವೆ ಮಾಡಿತು ಮತ್ತು ತನ್ನದೇ ಆದ ಸ್ವಭಾವದಿಂದಾಗಿ 'ವಿಶ್ವಗುರು' ಆಯಿತು ಎಂದು ಹೇಳಿದರು.

