ಪಾಟ್ನಾ: ಬಿಹಾರದಲ್ಲಿ ಭ್ರಷ್ಟ ಅಧಿಕಾರಿಗಳು, ಅದರಲ್ಲೂ ಪೊಲೀಸ್ ಅಧಿಕಾರಿಗಳ ವಿರುದ್ಧ ವಿಚಕ್ಷಣ ದಳದ ಅಧಿಕಾರಿಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದು, ರಾಜ್ಯದ ಕೆಲವು ಸರ್ಕಾರಿ ಅಧಿಕಾರಿಗಳು ಲಂಚ ಸ್ವೀಕರಿಸಲು ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.
ದೂರವಾಣಿಯಲ್ಲಿ ನೇರವಾಗಿ ಲಂಚದ ಬೇಡಿಕೆ ಇಡುವ ಬದಲು, ಕೋಡ್ ವರ್ಡ್ಗಳನ್ನು ಬಳಸುತ್ತಿದ್ದಾರೆ.
ವಿಚಕ್ಷಣ ದಳದ ಅಧಿಕಾರಿಗಳ ಬಲೆಗೆ ಸಿಲುಕದಂತೆ 'ಏಕ್ ಬೋರಾ ಚಾವಲ್' (ಒಂದು ಚೀಲ ಅಕ್ಕಿ), 'ಏಕ್ ಪೆಟಿ' (ಒಂದು ಪೆಟ್ಟಿಗೆ), 'ತೆಲ್-ಪಾನಿ' (ಎಣ್ಣೆ-ನೀರು) ಮುಂತಾದ ರಹಸ್ಯ ಸಂಕೇತ ಪದಗಳನ್ನು ಬಳಸುತ್ತಿದ್ದಾರೆ.
ಪ್ರಕರಣ 1
ಪಾಟ್ನಾದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹಲ್ಲೆ ಆರೋಪಿಯಾಗಿದ್ದ ವ್ಯಕ್ತಿಯ ಹೆಸರನ್ನು ಪ್ರಕರಣದಿಂದ ತೆಗೆದುಹಾಕಲು 'ಒಂದು ಚೀಲ ಅಕ್ಕಿ' ನೀಡುವಂತೆ ತನಿಖಾಧಿಕಾರಿ ಅಜಿತ್ ಕುಮಾರ್ ಸಿಂಗ್ ಬೇಡಿಕೆ ಇಟ್ಟಿದ್ದರು. ಒಂದು ಚೀಲ ಅಕ್ಕಿ ಎಂದರೆ ₹1 ಲಕ್ಷ ಎಂದರ್ಥ.
ಆರೋಪಿಯ ತಾಯಿ ತನಿಖಾಧಿಕಾರಿಯೊಂದಿಗೆ ಮಾತುಕತೆ ನಡೆಸಿ ವ್ಯವಹಾರ ಕುದುರಿಸಿಕೊಂಡು, ಬಳಿಕ ದೂರವಾಣಿ ಸಂಭಾಷಣೆಯ ಆಡಿಯೊ ದಾಖಲೆಯನ್ನು ವಿಚಕ್ಷಣ ದಳದ ಅಧಿಕಾರಿಗಳಿಗೆ ನೀಡಿದ್ದಾರೆ. ಪರಿಶೀಲನೆ ನಡೆಸಿದ ಅಧಿಕಾರಿಗಳು, ಕಾರ್ಯಾಚರಣೆ ನಡೆಸಿ ಪೊಲೀಸ್ ಅಧಿಕಾರಿಯನ್ನು ಬಂಧಿಸಿದ್ದಾರೆ.
ಪ್ರಕರಣ 2
ಇತ್ತೀಚೆಗೆ ಕಂದಾಯ ಮತ್ತು ಭೂ ಸುಧಾರಣಾ ಇಲಾಖೆಯ ಅಧಿಕಾರಿ ಕಾಂಚನ್ ಕುಮಾರಿ ಝಾ ಅವರನ್ನು ವಿಚಕ್ಷಣ ಅಧಿಕಾರಿಗಳು ಬಂಧಿಸಿದ್ದರು. ಅವರ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ಅವರ ಮನೆಕೆಲಸದಾತ, ಭೂಮಿಗೆ ಸಂಬಂಧಿಸಿದ ಪ್ರಕರಣವೊಂದನ್ನು ಇತ್ಯರ್ಥಗೊಳಿಸಲು ಒಂದು ವಾಷಿಂಗ್ ಮಷಿನ್ ಮತ್ತು ₹2 ಲಕ್ಷ ಬೇಡಿಕೆ ಇಟ್ಟಿದ್ದ.
ಪ್ರಕರಣ 3
ಇತ್ತೀಚೆಗೆ ನಿವೃತ್ತರಾದ ಮಹಾನಗರ ಪಾಲಿಕೆಯ ಉದ್ಯೋಗಿಯೊಬ್ಬರಿಗೆ ಅವರ ಭವಿಷ್ಯ ನಿಧಿ (ಪಿಎಫ್) ಮತ್ತು ಗ್ರಾಚ್ಯುಟಿ ಹಣ ಬಿಡುಗಡೆ ಮಾಡಲು 'ಏಕ್ ಪೆಟಿ' ನೀಡುವಂತೆ ಕೇಳಲಾಗಿತ್ತು. 'ಏಕ್ ಪೆಟಿ' ಎಂದರೆ ₹1 ಲಕ್ಷ. ನಿವೃತ್ತ ಉದ್ಯೋಗಿ ಈ ಸಂಕೇತದ ಮೂಲಕ ವ್ಯವಹಾರ ಕುದುರಿಸಿಕೊಂಡು, ಮಾತುಕತೆಯ ಆಡಿಯೊ ದಾಖಲೆಯನ್ನು ವಿಚಕ್ಷಣ ದಳದ ಅಧಿಕಾರಿಗಳಿಗೆ ನೀಡಿದ್ದರು. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಬಂಧಿಸಲಾಯಿತು.
ಪ್ರಕರಣ 4
ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಬಾಲಕಿಯೊಬ್ಬಳನ್ನು ಅಪಹರಿಸಲಾಗಿತ್ತು. ಆಕೆಯನ್ನು ಪತ್ತೆಮಾಡಿ ಮರಳಿ ಕರೆತರಲು ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದರೂ, ತನಿಖೆ ಮುಂದುವರಿಯಲಿಲ್ಲ. ಈ ಸಂದರ್ಭದಲ್ಲಿ ತನಿಖಾಧಿಕಾರಿ 'ತೆಲ್-ಪಾನಿ' ಎಂಬ ಸಂಕೇತ ಪದ ಬಳಸಿ ಕುಟುಂಬದ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. 'ತೆಲ್-ಪಾನಿ' ಎಂದರೆ ₹ 10,000 ಎಂದರ್ಥ.
ಕುಟುಂಬಸ್ಥರು ವಿಚಕ್ಷಣ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ತನಿಖಾಧಿಕಾರಿ ಮೇಘನಾಥ್ ರಾಮ್ ಅವರನ್ನು ಬಂಧಿಸಲಾಗಿದೆ.

