ಕಾಸರಗೋಡು: ಕುತ್ತಿಕ್ಕೋಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿವೇಡಗಂ ಗ್ರಾಮದ ಒಟ್ಟಮಾವುಂಗಲ್ನಲ್ಲಿ ನಿರ್ಮಾಣಹಂತದ ಮನೆಯೊಂದರ ತಳಭಾಗದಲ್ಲಿ ಗುಹೆ ಪತ್ತೆಯಾದಪ್ರದೇಶಕ್ಕೆ ತಜ್ಞರ ತಂಡವೊಂದು ಭೇಟಿ ನೀಡಿ ಸಮಗ್ರ ಅಧ್ಯಯನ ನಡೆಸಿದೆ.
ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರ ನಿರ್ದೇಶದ ಮೇರೆಗೆ ತಜ್ಞರ ತಂಡವೊಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ತಜ್ಞರ ತಂಡದಲ್ಲಿ ಜಿಲ್ಲಾ ಮಣ್ಣು ಸಂರಕ್ಷಣಾಧಿಕಾರಿ ಪ್ರಕಾಶನ್, ಸಹಾಯಕ ಭೂವಿಜ್ಞಾನಿ ಅಜಿತ್ ಮತ್ತು ಅಪಾಯ ವಿಶ್ಲೇಷಕಿ ಶಿಲ್ಪಾ ಅವರನ್ನೊಳಗೊಂಡ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ವರದಿಯನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸುವುದಾಗಿ ತಜ್ಞರ ತಂಡ ತಿಳಿಸಿದೆ. ವರದಿ ಕೈಸೇರಿದ ನಂತರ ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ನಿರ್ಮಾಣ ಹಂತದ ಮನೆಯ ತಳಭಾಗದಲ್ಲಿ ಭಾರೀ ಗುಹೆಯೊಂದು ನಿರ್ಮಾಣವಾಗಿರುವ ಕುರಿತು ಮನೆಯ ಮಾಲೀಕರು ಸರ್ಕಾರದ ಪರಿಹಾರ ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.



