ಕಾಸರಗೋಡು: ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಐಸಿಎಆರ್-ಸಿಪಿಸಿಆರ್ಐ)ದಲ್ಲಿ 'ವಿಶ್ವ ತೆಂಗು-2026'ದಿನವನ್ನು ಸಎ. 2ರಂದು ಆಚರಿಸಲಾಗುವುದು. "ಅನಿಶ್ಚಿತತೆಯ ಕಾಲದಲ್ಲಿ ತೆಂಗಿನಕಾಯಿ-ಆಹಾರ, ಇಂಧನ ಮತ್ತು ಜೀವನೋಪಾಯದ ಭದ್ರತೆ" ಎಂಬುದು ಈ ವರ್ಷದ ವಿಶ್ವ ತೆಂಗಿನಕಾಯಿ ದಿನದ ಧ್ಯೇಯವಾಕ್ಯವಾಗಿದೆ.
ವಿಶ್ವ ತೆಂಗು ಆಚರಣೆ ಅಂಗವಾಗಿ, ಐಸಿಎಆರ್-ಸಿಪಿಸಿಆರ್ಐ(ಶಿಟಿಜ್- 2.0) ಎಂಬ ಆನ್ಲೈನ್ ಉದ್ಯಮಿ ಮಾರ್ಗದರ್ಶನ ಮತ್ತು ಪೂರ್ವ-ಇನ್ಕ್ಯುಬೇಷನ್ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.
ಆಕಾಂಕ್ಷಿ ಉದ್ಯಮಿಗಳು, ಸ್ಟಾರ್ಟಪ್ಗಳು ಮತ್ತು ನಾವೀನ್ಯಕಾರರು ತಮ್ಮ ಆಲೋಚನೆಗಳು ಹಾಗೂ ತಂತ್ರಜ್ಞಾನಗಳನ್ನು ಕಾರ್ಯಸಾಧ್ಯವಾದ ಉದ್ಯಮಗಳಾಗಿ ಪರಿವರ್ತಿಸಲು ಬೆಂಬಲ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಇದೇ ಸಂದರ್ಭ "ತೋಟಗಾರಿಕಾ ಬೆಳೆಗಳಲ್ಲಿ ತೀವ್ರ ಹವಾಮಾನ ವೈಪರೀತ್ಯದ ದುರ್ಬಲತೆಯ ನಿರ್ವಹಣೆ" ಕುರಿತಾದ ಎರಡು ದಿನಗಳ ಕಾರ್ಯಾಗಾರ ನಡೆಯಲಿದೆ. ಪುತ್ತೂರಿನ ಐಸಿಎಆರ್-ಗೇರುಬೀಜ ಸಂಶೋಧನಾ ನಿರ್ದೇಶನಾಲಯದ (Iಅಂಖ-ಆiಡಿeಛಿಣoಡಿಚಿಣe oಜಿ ಅಚಿsheತಿ ಖeseಚಿಡಿಛಿh) ನಿರ್ದೇಶಕ ಡಾ. ದಿನಕರ್ ಅಡಿಗ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿಶ್ವ ತೆಂಗು ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸುವರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಂಟೇಷನ್ ಮ್ಯಾನೇಜ್ಮೆಂಟ್ನ ನಿರ್ದೇಶಕ ಡಾ. ಸೆಂಥಿಲ್ ವಿನಾಯಕಂ ಅವರು ಪಾಲುದಾರರ ಕಾರ್ಯಾಗಾರ ಉದ್ಘಾಟಿಸುವರು.
ಸಮಾರಂಭದಲ್ಲಿ ಐಸಿಎಆರ್ ಸಂಸ್ಥೆಗಳು, ರಾಜ್ಯ ಸರ್ಕಾರದ ಇಲಾಖೆಗಳು, ಅಭಿವೃದ್ಧಿ ಸಂಸ್ಥೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ(ಕೆವಿಕೆ) ಅಧಿಕಾರಿಗಳು, ತೆಂಗು ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಪ್ರದೇಶಗಳ ರೈತರು, ರೈತ ಉತ್ಪಾದಕ ಸಂಸ್ಥೆಗಳು(ಎಫ್ಪಿಓ), ಉದ್ಯಮಿಗಳು ಮತ್ತು ಸ್ಟಾರ್ಟಪ್ಗಳು ಭಾಗವಹಿಸಲಿವೆ. ತೆಂಗು ಕೃಷಿಯಲ್ಲಿ ನಡೆಸಿರುವ ಸಾಧನೆಗಾಗಿ ವಿವಿಧ ತೆಂಗು ಬೆಳೆಯುವ ರಾಜ್ಯಗಳ ಪ್ರಮುಖ ರೈತರನ್ನು ಈ ಸಂದರ್ಭ ಗೌರವಿಸಲಾಗುವುದು.
ಈ ಸಂದರ್ಭ ಐಸಿಎಆರ್-ಸಿಪಿಸಿಆರ್ಐ ಅಭಿವೃದ್ಧಿಪಡಿಸಿದ ವಿವಿಧ ತಂತ್ರಜ್ಞಾನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಹಾಗೂ ಪ್ರಮುಖ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಗುವುದು. ತೋಟಗಾರಿಕಾ ಬೆಳೆಗಳ ವಲಯದಲ್ಲಿ ಸಾಂಸ್ಥಿಕ ಸಹಯೋಗವನ್ನು ಬಲಪಡಿಸಲು ಮತ್ತು ತಂತ್ರಜ್ಞಾನಗಳ ಅಳವಡಿಕೆ ಹಾಗೂ ವಾಣಿಜೀಕರಣವನ್ನು ಉತ್ತೇಜಿಸಲು ತಿಳುವಳಿಕೆ ಒಪ್ಪಂದಗಳಿಗೆ ಸಹ ಸಹಿ ಹಾಕಲಾಗುವುದು.
ದೇಶವು ಎಲ್ ನಿನೋ ಪರಿಣಾಮಗಳು ಮತ್ತು ಹೆಚ್ಚುತ್ತಿರುವ ಹವಾಮಾನ ವೈಪರೀತ್ಯಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಈ ಪಾಲುದಾರರ ಕಾರ್ಯಾಗಾರವು ತೋಟಗಾರಿಕಾ ಬೆಳೆಗಳ ಮೇಲೆ ಉಂಟಾಗುವ ತೀವ್ರ ಹವಾಮಾನ ಒತ್ತಡಗಳನ್ನು ಅರ್ಥಮಾಡಿಕೊಳ್ಳುವ ಮತ್ತು ನಿರ್ವಹಿಸುವ ವಿಷಯಕ್ಕೆ ವಿಶೇಷ ಆದ್ಯತೆ ನೀಡಲಿದೆ.
ವಿವಿಧ ವಿಷಯಗಳ ಬಗ್ಗೆ ತಾಂತ್ರಿಕ ಅಧಿವೇಶನಗಳು, ತಜ್ಞರಿಂದ ವಿಷಯ ಮಂಡನೆ, ಚರ್ಚೆ ನಡೆಯಲಿದೆ.



