ನವದೆಹಲಿ (PTI): ಛತ್ತೀಸಗಢದಲ್ಲಿರುವ ಜೀವವೈವಿಧ್ಯ ತಾಣವಾಗಿರುವ ಹಸ್ದೇವ್ ಅರಣ್ಯ ಪ್ರದೇಶದಲ್ಲಿತಾರಾ ಕಲ್ಲಿದ್ದಲು ಬ್ಲಾಕ್ ಹರಾಜು ಮಾಡಿರುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
'ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲದೊಂದಿಗೆ ಪರಿಸರ ನಾಶದ ಕಾರ್ಯ ಕೈಗೊಳ್ಳುತ್ತಿರುವುದಕ್ಕೆ ಇದು ಮತ್ತೊಂದು ಉದಾಹರಣೆ' ಎಂದು ಗುರುವಾರ ಆರೋಪಿಸಿದೆ.
'ತಾರಾ ಕಲ್ಲಿದ್ದಲು ಬ್ಲಾಕ್ 500 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಅದರಲ್ಲಿ 400 ಎಕರೆಗೂ ಅಧಿಕ ಪ್ರದೇಶದಲ್ಲಿ ದಟ್ಟ ಅರಣ್ಯ ಇದೆ. ಮರು ಅರಣ್ಯೀಕರಣ ಎನ್ನುವುದು ಬೋಗಸ್ ಯೋಜನೆ. ಇದರಿಂದ ಇಷ್ಟು ದೊಡ್ಡ ನೈಸರ್ಗಿಕ ಕಾಡನ್ನು ಮರುನಿರ್ಮಿಸಲು ಸಾಧ್ಯವಿಲ್ಲ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.
'ತಾರಾ ಕಲ್ಲಿದ್ದಲು ಬ್ಲಾಕ್ ಅನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಹರಾಜಿಗಿಟ್ಟಿತ್ತು. ಈ ಹರಾಜಿನಲ್ಲಿ ಯಾವ ಕಂಪನಿ ಕಲ್ಲಿದ್ದು ಬ್ಲಾಕ್ ಪಡೆಯಿತು ಎನ್ನುವ ಬಗ್ಗೆ ಆಶ್ಚರ್ಯಪಡಬೇಕಾಗಿಲ್ಲ. ಮುಂದ್ರಾ ಸಿನ್ಎನರ್ಜಿಯ ಪೂರ್ಣಸ್ವಾಮ್ಯದಲ್ಲಿರುವ ಸಿಜಿ ಸಿನ್-ಗ್ಯಾಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್ ಹರಾಜಿನಲ್ಲಿ ಗೆದ್ದಿದೆ. ಮುಂದ್ರಾ ಸಿನ್ಎನರ್ಜಿಯು ಮೊದಾನಿ ಸಮೂಹದ ಕಿರೀಟವಾಗಿರುವ ಅದಾನಿ ಎಂಟರ್ಪ್ರೈಸಸ್ನ ಅಂಗಸಂಸ್ಥೆಯಾಗಿದೆ' ಎಂದು ತಿಳಿಸಿದರು.
'ಕಳೆದ 15 ವರ್ಷದಿಂದ ಸ್ಥಳೀಯ ಆದಿವಾಸಿಗಳು ಕಲ್ಲಿದ್ದಲು ಗಣಿಗಾರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರ ಜೀವನ ಈ ಕಾಡನ್ನು ಅವಲಂಬಿಸಿದೆ. ಲೆಮ್ರು ಆನೆ ಸಂರಕ್ಷಿತ ಅರಣ್ಯದಲ್ಲಿಯೂ ಗಣಿಗಾರಿಕೆ ನಡೆಯುತ್ತದೆ. ಇದರಿಂದಾಗಿ ಕ್ಷೀಣಿಸುವ ಹಂತದಲ್ಲಿರುವ ಪ್ರಾಣಿಗಳನ್ನು ಇನ್ನಷ್ಟು ಅಪಾಯಕ್ಕೆ ಈಡುಮಾಡಿದಂತಾಗುತ್ತದೆ' ಎಂದು ಹೇಳಿದರು.
ತಾರಾ ಸೇರಿದಂತೆ ಒಂಬತ್ತು ಕಲ್ಲಿದ್ದಲು ಬ್ಲಾಕ್ಗಳನ್ನು ಹರಾಜಿನಿಂದ ಹೊರಗೆ ಇಡುವಂತೆ ಛತ್ತೀಸಗಢ ರಾಜ್ಯ ಸರ್ಕಾರವು ಕೇಂದ್ರ ಕಲ್ಲಿದ್ದಲು ಸಚಿವಾಲಯಕ್ಕೆ 2023 ಜೂನ್ನಲ್ಲಿ ಬರೆದಿದ್ದ ಪತ್ರವನ್ನು ಜೈರಾಮ್ ರಮೇಶ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

