ನವದೆಹಲಿ: ಗ್ರೇಟರ್ ನೋಯ್ಡಾ ಮತ್ತು ದಿಲ್ಲಿ ನಡುವೆ ಚಲಿಸುತ್ತಿದ್ದ ಬಸ್ಸೊಂದರಲ್ಲಿ 16 ವರ್ಷದ ಅಪ್ರಾಪ್ತೆಯ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಘಟನೆಯ ನಂತರ, ಈಗಾಗಲೇ ವಿಧಿಸಲಾಗಿರುವ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ದಿಲ್ಲಿ ಸರ್ಕಾರದ ಸಾರಿಗೆ ಇಲಾಖೆಯು ಮಂಗಳವಾರ ಬಸ್ ಗಳಿಗೆ ಹೊಸದಾಗಿ ನಿರ್ದೇಶನ ನೀಡಿದೆ.
ಬಸ್ ಗಳಲ್ಲಿ ಕಾರ್ಯನಿರ್ವಹಿಸುವ GPS ಮತ್ತು ಪ್ಯಾನಿಕ್ ಬಟನ್ ಗಳು ಇರಬೇಕು, ಪರದೆಗಳನ್ನು ಹಾಕಬಾರದು, ಕಿಟಕಿ ಗಾಜುಗಳಿಗೆ ಬಣ್ಣದ ಫಿಲ್ಮ್ ಗಳನ್ನು ಅಂಟಿಸಬಾರದು ಹಾಗೂ ಬಸ್ ನ ಒಳಗೆ ಸರಿಯಾದ ಬೆಳಕಿನ ವ್ಯವಸ್ಥೆ ಮಾಡಬೇಕು ಎನ್ನುವುದು ಸುರಕ್ಷತಾ ಕ್ರಮಗಳಲ್ಲಿ ಸೇರಿವೆ.
ದಿಲ್ಲಿಯಲ್ಲಿ ಸಂಚರಿಸುವ ಇತರ ರಾಜ್ಯಗಳ ವಾಹನಗಳು ಸೇರಿದಂತೆ ಎಲ್ಲಾ ಬಸ್ ನಿರ್ವಾಹಕರು ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಬೇಕು ಹಾಗೂ ತಾವು ಪಾಲಿಸಬೇಕಾಗಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಗಸ್ಟ್ 31ರಂದು ಹೊರಡಿಸಲಾದ ಆದೇಶದಲ್ಲಿ ರಾಜ್ಯ ಸಾರಿಗೆ ಪ್ರಾಧಿಕಾರ ಸೂಚಿಸಿದೆ.
ಬಸ್ ಗಳಲ್ಲಿ ಪರದೆಗಳನ್ನು ಅಳವಡಿಸಬಾರದು ಅಥವಾ ಕಿಟಕಿಗಳನ್ನು ಯಾವುದೇ ಫಿಲ್ಮ್ ಗಳಿಂದ ಮುಚ್ಚಬಾರದು ಎಂದು ಎರಡು ಪುಟಗಳ ಈ ಆದೇಶದಲ್ಲಿ ತಿಳಿಸಲಾಗಿದೆ. ಬಸ್ ಚಲಿಸುತ್ತಿರುವಾಗ ಒಳಗಿನ ಚಟುವಟಿಕೆಗಳು ಹೊರಗಿನಿಂದ ಸ್ಪಷ್ಟವಾಗಿ ಕಾಣುವಂತೆ ಒಳಗೆ ಸಾಕಷ್ಟು ಬೆಳಕು ಇರುವಂತೆ ನೋಡಿಕೊಳ್ಳಬೇಕೆಂದು ನಿರ್ವಾಹಕರಿಗೆ ಸೂಚಿಸಲಾಗಿದೆ.
ರಾತ್ರಿ ವೇಳೆ ಅಥವಾ ಪ್ರಯಾಣ ಇಲ್ಲದಿರುವ ಸಮಯದಲ್ಲಿ ಬಸ್ ಗಳನ್ನು ಅಧಿಕೃತ, ಸುರಕ್ಷಿತ ಮತ್ತು ಸಾಕಷ್ಟು ಬೆಳಕಿರುವ ಸ್ಥಳಗಳಲ್ಲಿ ಮಾತ್ರ ನಿಲ್ಲಿಸಬೇಕು ಎಂಬುದಾಗಿಯೂ ಸೂಚಿಸಲಾಗಿದೆ.

