ನವದೆಹಲಿ: ಪ್ರಸ್ತುತ ನಡೆಯುತ್ತಿರುವ ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (DUSU) ಚುನಾವಣಾ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ನಿಯಮ ಉಲ್ಲಂಘನೆಗಳ ಕುರಿತು ಹೈಕೋರ್ಟ್ ಶುಕ್ರವಾರ ಎಬಿವಿಪಿ, ಎನ್ಎಸ್ಯುಐ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳನ್ನು ತರಾಟೆಗೆ ತೆಗೆದುಕೊಂಡಿದೆ.
"ನೀವೆಲ್ಲ ನಿಜವಾಗಿಯೂ ವಿದ್ಯಾರ್ಥಿಗಳೇ? ಲಿಂಗ್ಡೋ ಸಮಿತಿಯ ಶಿಫಾರಸುಗಳ ಪ್ರಕಾರವೇ ಚುನಾವಣೆಗಳು ನಡೆಯಬೇಕು ಎಂದು ಸಭೆಗಳಲ್ಲಿ ಭಾಗವಹಿಸುತ್ತೀರಿ. ಆಮೇಲೆ ಹೀಗೆ ಮಾಡುತ್ತೀರಾ?" ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಡಿಯುಎಸ್ಯು ಚುನಾವಣಾ ಪ್ರಚಾರದ ವೇಳೆ ಹಿಂಸಾಚಾರ ಹಾಗೂ ನಿಯಮ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಪ್ರಶ್ನೆಗಳನ್ನು ಎತ್ತಿದೆ.
ಉತ್ತರ ಕ್ಯಾಂಪಸ್ ನಲ್ಲಿ ನಂಬರ್ ಪ್ಲೇಟ್ ಇಲ್ಲದ ವಾಹನಗಳು ಸೇರಿದಂತೆ ಬೆಂಗಾವಲು ಪಡೆಯ ಮಾದರಿಯಲ್ಲಿ ವಾಹನಗಳ ಮೆರವಣಿಗೆ ನಡೆಸಿರುವ ಬಗ್ಗೆಯೂ ಪೀಠವು ದಿಲ್ಲಿ ಪೊಲೀಸರನ್ನು ಪ್ರಶ್ನಿಸಿದೆ.
ಈ ಕುರಿತು ಉಪ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿದ ನ್ಯಾಯಾಲಯ, "ಫೋಟೋಗಳಲ್ಲಿ ಕಾಣುತ್ತಿರುವುದು ಸುಳ್ಳು ಎಂದು ನೀವು ಹೇಳಲಾಗುವುದಿಲ್ಲ. ಸಾಕಷ್ಟು ಪೊಲೀಸ್ ನಿಯೋಜನೆ ಇದ್ದರೂ ಇಂತಹ ಚಟುವಟಿಕೆಗಳಿಗೆ ಹೇಗೆ ಅವಕಾಶ ನೀಡಲಾಯಿತು?" ಎಂದು ತರಾಟೆಗೆ ತೆಗೆದುಕೊಂಡಿದೆ.
ಇದಕ್ಕೆ ಉತ್ತರಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್, ದಿಲ್ಲಿ ಪೊಲೀಸರ ವರದಿ ಸೇರಿದಂತೆ ವಸ್ತುಸ್ಥಿತಿ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
2026-27ನೇ ಸಾಲಿನ DUSU ಚುನಾವಣೆಯ ಮತದಾನ ನಡೆಯುತ್ತಿರುವ ಸಂದರ್ಭದಲ್ಲೇ ಈ ವಿಚಾರಣೆ ನಡೆದಿದೆ.
ಭದ್ರತೆಯ ದೃಷ್ಟಿಯಿಂದ ಪೊಲೀಸರು ಉತ್ತರ ಕ್ಯಾಂಪಸ್ ಅನ್ನು ಐದು ವಲಯಗಳು ಹಾಗೂ 23 ಸೆಕ್ಟರ್ಗಳಾಗಿ ವಿಂಗಡಿಸಿದ್ದು, ಎಸಿಪಿ ಮತ್ತು ಇನ್ಸ್ಪೆಕ್ಟರ್ ಮಟ್ಟದ ಅಧಿಕಾರಿಗಳಿಗೆ ಭದ್ರತೆಯ ಮೇಲ್ವಿಚಾರಣೆ ವಹಿಸಿದ್ದಾರೆ. ಕಾಲೇಜು ಗೇಟ್ಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಪಿಕೆಟ್ ಗಳು ಮತ್ತು ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ.
ಪ್ರಮುಖ ನಾಲ್ಕು ಹುದ್ದೆಗಳಿಗೆ ಎಬಿವಿಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಎನ್ಎಸ್ಯುಐ ಸೇರಿದಂತೆ ಇತರ ವಿದ್ಯಾರ್ಥಿ ಸಂಘಟನೆಗಳೂ ಸ್ಪರ್ಧೆಯಲ್ಲಿವೆ. ಮತ ಎಣಿಕೆ ಸೆಪ್ಟೆಂಬರ್ 19ರಂದು ನಡೆಯಲಿದೆ.

