ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುಜನ ಖರ್ಗೆ ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳದಲ್ಲಿ ನಡೆದ 'ಶುದ್ಧೀಕರಣ' ವಿಧಿ ಕುರಿತು ಹೇಳಿಕೆೆ ನೀಡಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಕಾಂಗ್ರೆಸ್ ಸೋಮವಾರ ತೀವ್ರವಾಗಿ ಖಂಡಿಸಿದೆ.
ಈ ಎಫ್ಐಆರ್ಗೆ ಪ್ರಜಾಸತ್ತಾತ್ಮಕ ಮತ್ತು ಕಾನೂನಾತ್ಮಕವಾಗಿ ಸೂಕ್ತ ಉತ್ತರ ನೀಡುವುದಾಗಿ ವಿರೋಧ ಪಕ್ಷ ಹೇಳಿದೆ. ಘಟನೆಯ ಹಿಂದಿರುವ ಜಾತಿವಾದಿ ಮನಸ್ಥಿತಿಯ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಅದು ಸ್ಪಷ್ಟಪಡಿಸಿದೆ.
'ಶುದ್ಧೀಕರಣ' ವಿಧಿಯನ್ನು ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಅದರ ವಿರುದ್ಧ ಧ್ವನಿ ಎತ್ತಿದ ರಾಹುಲ್ ಗಾಂಧಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಉತ್ತರಾಖಂಡದ ಕಾಂಗ್ರೆಸ್ನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕುಮಾರಿ ಸೆಲ್ಜಾ ಅವರು 'ಎಕ್ಸ್'ನ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಈ ಧಾರ್ಮಿಕ ವಿಧಿ ನೆರವೇರಿದ ನಂತರ ಉತ್ತರಾಖಂಡ ಬಿಜೆಪಿ ಅಧ್ಯಕ್ಷರು ಅದನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಇದಕ್ಕೆ ಜವಾಬ್ದಾರರಾದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ ನಂತರ ಬಿಜೆಪಿ ಸರಕಾರ ಗಾಂಧಿ ಅವರನ್ನು ಗುರಿಯಾಗಿರಿಸಿಕೊಂಡಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಈ ಬೆಳವಣಿಗೆ ಬಿಜೆಪಿ-ಆರ್ಎಸ್ಎಸ್ನ ''ದಲಿತ ವಿರೋಧಿ ಮತ್ತು ಸಂವಿಧಾನ ವಿರೋಧಿ'' ಮನಸ್ಥಿತಿಗೆ ಉತ್ತಮ ಉದಾಹರಣೆ ಎಂದು ಸೆಲ್ಜಾ ಬಣ್ಣಿಸಿದರು. ಖರ್ಗೆ ಅವರು ಸಂಸತ್ತಿನಲ್ಲಿ ಪ್ರಸ್ತಾವಿಸಿದ್ದ ವಿಷಯವನ್ನೇ ರಾಹುಲ್ ಗಾಂಧಿ ಎತ್ತಿದ್ದಾರೆ ಎಂದು ಹೇಳಿದ ಅವರು, ಈ ಘಟನೆ ಅಸ್ಪಶತೆಯ ನೋವನ್ನು ಮರಳಿ ತಂದಿದೆ ಮತ್ತು ಅವರನ್ನು ಅವಮಾನಿಸಿದೆ ಎಂದು ಪ್ರತಿಪಾದಿಸಿದರು.
''ಆದರೆ, ಬಿಜೆಪಿ ಸರಕಾರದ ಧೋರಣೆ ನೋಡಿ. ಶುದ್ಧೀಕರಣ ನಡೆಸಿದವರ ಬಗ್ಗೆ ಪ್ರಶ್ನೆ ಕೇಳಿದರೆ-ಎಫ್ಐಆರ್. ದಲಿತರ ಗೌರವದ ಬಗ್ಗೆ ಮಾತನಾಡಿದರೆ-ಎಫ್ಐಆರ್. ಸಂವಿಧಾನಕ್ಕೆ ಧ್ವನಿ ಎತ್ತಿದರೆ-ಎಫ್ಐಆರ್'' ಎಂದು ಸೆಲ್ಜಾ ಹೇಳಿದರು.
ಈ ಇಡೀ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ಮೌನವಾಗಿದ್ದಾರೆ ಎಂದು ಸೆಲ್ಜಾ ಪ್ರಶ್ನಿಸಿದರು.

