ಇಂದು ಉಪ್ಪಳ ಅಗರ್ತಿಮೂಲೆಯಲ್ಲಿ ಯಕ್ಷನುಡಿಸರಣಿ 9 ಮತ್ತು ಕನ್ನಡ ಜಾಗೃತಿ ಉಪನ್ಯಾಸ
0
ಡಿಸೆಂಬರ್ 21, 2018
ಉಪ್ಪಳ: ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಇದರ ನೇತೃತ್ವದಲ್ಲಿ ನಡೆಯುತ್ತಿರುವ ಯಕ್ಷನುಡಿ ಸರಣಿ ಮನೆ ಮನೆ ಅಭಿಯಾನದ ಒಂಭತ್ತನೇ ಕಾರ್ಯಕ್ರಮವು ಉಪ್ಪಳ ಅಗರ್ತಿಮೂಲೆಯ ಗೀತಾ ಅವರ ನಿವಾಸ ದಲ್ಲಿ ಇಂದು (ಶನಿವಾರ) ಅಪರಾಹ್ನ 1.30 ಕ್ಕೆ ನಡೆಯಲಿದೆ.
ಕಾರ್ಯಕ್ರಮವನ್ನು ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಹಿರಿಯ ಅಧೀಕ್ಷಕ ಕೇಶವ ಪ್ರಸಾದ್ ಕುಳಮರ್ವ ದೀಪಜ್ವಲನಗೊಳಿಸಿ ಉದ್ಘಾಟಿಸುವರು. ಸಿರಿಚಂದನ ಕನ್ನಡಯುವ ಬಳಗದ ಸದಸ್ಯೆ ಮತ್ತು ಜಿ.ಎಸ್.ಎಸ್ ಆದೂರು ಶಾಲೆಯ ಶಿಕ್ಷಕಿ ತಾಹಿರಾ ಎಂ. ಕನ್ನಡ ಜಾಗೃತಿ ಉಪನ್ಯಾಸ ನೀಡುವರು. ಬಳಗದ ಕೋಶಾಧಿಕಾರಿ ವಿನೋದ್ ಕುಮಾರ್ ಸಿ.ಎಚ್ ಅಧ್ಯಕ್ಷತೆ ವಹಿಸುವರು. ಯಕ್ಷಗುರು ರಾಮ ಸಾಲಿಯಾನ್ ಮಂಗಲ್ಪಾಡಿ, ಅಗರ್ತಿಮೂಲೆ ಅಯ್ಯಪ್ಪಭಜನಾ ಮಂದಿರದ ಗೌರವಾಧ್ಯಕ್ಷ ಸಿದ್ಧಪ್ಪ ಅಗರ್ತಿಮೂಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಾರ್ಗದರ್ಶಕ ಡಾ. ರತ್ನಾಕರ ಮಲ್ಲಮೂಲೆ ಪ್ರಾಸ್ತವಿಕವಾಗಿ ಮಾತನಾಡುವರು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನದ ಹಿರಿಯ ಕಲಾವಿದ ದಿವಾಣ ಶಿವಶಂಕರ ಭಟ್ ಅವರ ಮಾರ್ಗದರ್ಶನದಲ್ಲಿ ಸಿರಿ ಚಂದನ ಕನ್ನಡ ಯುವಬಳಗದ ಸದಸ್ಯರಿಂದ ಹಲಸಿನಹಳ್ಳಿ ನರಸಿಂಹಶಾಸ್ತ್ರಿ ವಿರಚಿತ 'ಭೀಷ್ಮ ವಿಜಯ' ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಸಂದೇಶ್ ಪಂಜಿತ್ತೊಟ್ಟಿ, ಚೆಂಡೆ ಮತ್ತು ಮದ್ದಳೆಯಲ್ಲಿ ಶಂಕರ ಕಾಮತ್ ಚೇವಾರು, ಶಿವರಾಮ ಆಚಾರ್ಯ ಧರ್ಮತ್ತಡ್ಕ ಸಹಕರಿಸುವರು. ಮುಮ್ಮೇಳದಲ್ಲಿ ಡಾ.ರತ್ನಾಕರ ಮಲ್ಲಮೂಲೆ, ನವೀನ ಕುಂಟಾರು, ಕಾರ್ತಿಕ್ ಪಡ್ರೆ, ಶ್ರದ್ಧಾ ಭಟ್ ನಾಯರ್ಪಳ್ಳ, ಮತ್ತು ಪ್ರದೀಪ್ ಕುಮಾರ್ ಎಡನೀರು ಪಾತ್ರ ನಿರ್ವಹಿಸುವರು.
ಗೀತಾ ಅಗರ್ತಿಮೂಲೆ, ಹರೀಶ್ ಮಂಗಲ್ಪಾಡಿ, ಶಿವಕುಮಾರ್ ಅಗರ್ತಿಮೂಲೆ, ಕಾವ್ಯಾ , ಯಶ್ಮಿತ, ಬಳಗದ ಅಧ್ಯಕ್ಷ ರಕ್ಷಿತ್ ಪಿ.ಎಸ್, ಸದಸ್ಯರಾದ ಸುಜಾತಾ ಸಿ.ಎಚ್, ಸುಜಿತ್ ಕುಮಾರ್ ಉಪ್ಪಳ ಮುಂತಾದವರು ಉಪಸ್ಥಿತರಿರುವರು.


