ಉಪ್ಪಳ ಹೊಳೆಯಿಂದ ಕೃಷಿ ಆವಶ್ಯಕ್ಕೆ ತೆಗೆಯುವ ನೀರಿಗೆ ಜಿಲ್ಲಾಧಿಕಾರಿಯಿಂದ ತಡೆ: ಕೃಷಿಕರಿಂದ ಪ್ರತಿಭಟನೆ
0
ಮಾರ್ಚ್ 15, 2019
ಉಪ್ಪಳ: ಮೀಂಜ ಗ್ರಾ. ಪಂ. ನ ಆರನೇ ವಾರ್ಡು ಹಾಗೂ ಪೈವಳಿಕೆ ಗ್ರಾ. ಪಂ. 1 ನೇ ವಾರ್ಡಿನಲ್ಲಿ ವಿಸ್ತರಿಸಿರುವ ಉಪ್ಪಳ ಹೊಳೆಯಿಂದ ಮೀಂಜ, ಕುಳೂರು, ಅರ್ಯಾಳ, ಚಿಗುರುಪಾದೆ ಮೊದಲಾದ ಪ್ರದೇಶಗಳಲ್ಲಿರುವ ಕಂಗು ಹಾಗೂ ಭತ್ತದ ಕೃಷಿ ಆವಶ್ಯಕ್ಕಾಗಿ ಶತಮಾನಗಳಿಂದ ಉಪಯೋಗಿಸಲಾಗುತ್ತಿದ್ದ ನೀರನ್ನು ಯಾವುದೇ ಮುನ್ಸೂಚನೆ ನೀಡದೆ ಜಿಲ್ಲಾಧಿಕಾರಿಯವರು ನಿಯಂತ್ರಿಸಲು ನೀಡಿರುವ ಆದೇಶವು ಇದೀಗ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.
ಗುರುವಾರ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬುರವರ ಅದೇಶದಂತೆ ಸ್ಥಳೀಯ ಕೃಷಿಕರಿಗೆ ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ಆಗಿ ಆಗಮಿಸಿದ ಪೈವಳಿಕೆ ಗ್ರಾ. ಪಂ. ಅಧಿಕಾರಿಗಳು ಹಾಗೂ ಪೈವಳಿಕೆ ವಿದ್ಯುತ್ ಸೆಕ್ಷನ್ ಸಿಬ್ಬಂದಿಗಳು ವಿದ್ಯುತ್ ಸಂಪರ್ಕವನ್ನು ವಿಚ್ಚೇಧಿಸಿ ಇನ್ನು ಮುಂದಕ್ಕೆ ನೀರನ್ನು ತೆಗೆಯಬಾರದಾಗಿ ತಾಕೀತು ನೀಡಿ ಹೋಗಿರುವುದಾಗಿ ಸ್ಥಳೀಯ ಕೃಷಿಕರು ಆರೋಪಿಸಿದ್ದಾರೆ.
ಜಲನಿಧಿನಿಯ ಅಭಿಯಂತರರೊಬ್ಬರ ಎಡವಟ್ಟಿನಿಂದ ಇಂತಹ ಘಟನೆ ನಡೆದಿರುವುದಾಗಿಯೂ ಊರವರು ಹೇಳುತಿದ್ದಾರೆ. ಐದು ವರ್ಷಕ್ಕೆ ಮೊದಲು ತಲಾ 4000 ರೂ. ನಂತೆ ಸುಮಾರು 750 ಮನೆಗಳಿಂದ ಜಲನಿಧಿ ಯೋಜನೆಗಾಗಿ ಹಣವನ್ನು ಸಂಗ್ರಹಿಸಲಾಗಿರುವುದಾಗಿ ಹೇಳುತ್ತಿರುವ ನಾಗರಿಕರು ಬಳಿಕ ಈ ಯೋಜನೆ ಜಾರಿಗೆ ಬಂದ ಬಳಿಕ ಈ ತನಕ ಫಲಾನುಭವಿಗಳಿಗೆ ನೀರು ಲಭಿಸಿಲ್ಲವೆಂಬುದಾಗಿ ಹೇಳುತಿದ್ದಾರೆ. ಈ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಅದನ್ನು ಮರೆ ಮಾಚಲು ಅಭಿಯಂತರರು ಹೊಳೆಯಿಂದ ಕೃಷಿ ಆವಶ್ಯಕ್ಕಾಗಿ ನೀರನ್ನು ಬಳಸುವುದರಿಂದ ಕುಡಿಯಲು ನೀರು ಲಭಿಸುತ್ತಿಲ್ಲವೆಂದು ಜಿಲ್ಲಾಧಿಕಾರಿಯವರಿಗೆ ತಪ್ಪು ಮಾಹಿತಿಯನ್ನು ನೀಡಿರುವುದಾಗಿ ಊರವರು ಹೇಳುತಿದ್ದಾರೆ. ಈತನ ಆಚಾತುರ್ಯದಿಂದ ಇದೀಗ ಕುರುಡಪದವು ಪ್ರದೇಶದ ಕುರಿಯ ಸೀತಾರಾಮ ಶೆಟ್ಟಿ, ವಿಶ್ವನಾಥ ಶೆಟ್ಟಿ, ಜಯರಾಮ ಶೆಟ್ಟಿ, ರಾಮಣ್ಣ ಶೆಟ್ಟಿ, ರಮೇಶ್ ಶೆಟ್ಟಿ ಸಹಿತ ಸುಮಾರು 8 ಮಂದಿಗಳ ವಿದ್ಯುತ್ ಸಂಪರ್ಕವನ್ನು ವಿಚ್ಚೇಧಿಸಲಾಗಿದೆ. ಅದೇ ರೀತಿ ಮೀಂಜ ಗ್ರಾ. ಪಂ. ನ 18 ನೇ ವಾರ್ಡು ಕಳಾಯಿಯ ಮರಿಯಮ್ಮ ಫಕ್ರುದ್ದೀನ್, ಉಮ್ಮಲಿಮ್ಮ, ಲಕ್ಷ್ಮಿ ಆರ್ ಭಟ್ ಎಂಬವರ ವಿದ್ಯುತ್ ಸಂಪರ್ಕವನ್ನು ಕೂಡಾ ವಿಚ್ಚೇಧಿಸಿರುವುದಾಗಿ ಆರೋಪಿಸಲಾಗಿದೆ.
ಇಂತಹ ಕ್ರಮವನ್ನು ಪ್ರತಿಭಟಿಸಿ ಉಪ್ಪಳ ಹೊಳೆಯ ಸೇತುವೆಯ ಅಡಿಭಾಗದಲ್ಲಿ ಊರಿನ ಕೃಷಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ ಪ್ರತಿಭಟನೆಗೆ ಚಾಲನೆ ನೀಡಿದರು.ಪ್ರತಿಭಟನೆಯಲ್ಲಿ ಹಲವಾರು ಕೃಷಿಕರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನಾ ನಿರತರು ಪೈವಳಿಕೆ ಪಂ. ಗೆ ತೆರಳಿ ಮನವಿ ನೀಡಿದರು.

