ಧರ್ಮವು ಮಾನವನಿಗೆ ಸಾತ್ವಿಕ ದಾರಿ ತೋರಿಸುತ್ತದೆ : ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳು
0
ಮಾರ್ಚ್ 18, 2019
ಕಾಸರಗೋಡು: ಜ್ಞಾನ ಶಕ್ತಿ ಕ್ರಿಯಾಶಕ್ತಿಯಿಂದಾಗಿ ಕಾರ್ಯ ಸಿದ್ಧಿಸುತ್ತದೆ. ಆಸ್ತಿಕ ಸಮಾಜದಿಂದ ಮಾತ್ರ ಧರ್ಮೋದ್ಧಾರದ ಕಾರ್ಯ ಮುನ್ನಡೆಯಲು ಸಾಧ್ಯವಿದೆ. ಆಚಾರ್ಯ ಪ್ರಭವೋ ಧರ್ಮ ಎಂದಿದೆ ಶಾಸ್ತ್ರ. ಗುರೂಪದೇಶವೇ ನಮ್ಮ ಸಮಾಜವು ಧರ್ಮ ಮಾರ್ಗದಲ್ಲಿ ನಡೆಯಲು ಸಾಧ್ಯ. ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮವು ಮಾನವನಿಗೆ ಸಾತ್ವಿಕ ದಾರಿಯನ್ನು ತೋರಿಸುತ್ತದೆ ಎಂದು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಶ್ರೀ ಸಂಪುಟ ನರಸಿಂಹ ಮಠದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.
ಇತಿಹಾಸ ಪ್ರಸಿದ್ಧ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀಪಾದಂಗಳವರು ಆಶೀರ್ವಚನ ನೀಡಿದರು.
ದೇವತಾ ಸನ್ನಿಧಾನವನ್ನು ಕಾಪಾಡಿಕೊಳ್ಳುವುದು ಆಸ್ತಿಕ ಸಮಾಜದ ಕರ್ತವ್ಯ. ಅದಕ್ಕಾಗಿ ಹಿರಿಯರು ನಡೆಸಿಕೊಂಡು ಬಂದಂತಹ ವಿಧಿವಿಧಾನಗಳನ್ನು ಮುನ್ನಡೆಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಬೇಕು. ಈ ಸಂದೇಶವೇ ಪ್ರತಿಫಲನವೇ ನವೀಕರಣ ಬ್ರಹ್ಮಕಲಶೋತ್ಸವ ಆಗಿದೆ. ಧಾರ್ಮಿಕ ಸಭೆಯೆಂಬುದು ಧರ್ಮ ಜಾಗೃತಿಯ ವೇದಿಕೆಯಾಗಿದೆ. ಶ್ರೀ ರುದ್ರ ದೇವರು ಭಗವದ್ಭಕ್ತರ ಮನೋಭಿಷ್ಠಗಳನ್ನು ನೆರವೇರಿಸುವ ಕೃಪೆ ತೋರಲಿ ಎಂದರು.
ಶಿವತತ್ವವನ್ನು ರೂಢಿಸಿಕೊಳ್ಳಬೇಕು : ದೀರ್ಘಕಾಲದ ಮನೋಭಿಷ್ಠೆಯ ಸಾಕ್ಷಾತ್ಕಾರವೇ ಇಂದಿನ ಬ್ರಹ್ಮಕಲಶೋತ್ಸವ. ಇದಕ್ಕಾಗಿ ದುಡಿದ ಸರ್ವರೂ ಅಭಿನಂದನಾರ್ಹರು. ಕ್ಷೇತ್ರ ನವೀಕರಣದಿಂದಾಗಿ ಒಂದಂತೂ ಸತ್ಯ-ಹಿಂದೂ ಎಚ್ಚೆತ್ತುಕೊಂಡಿದ್ದಾನೆ. ಶಬರಿಮಲೆ ಘಟನೆಯಿಂದ ಇದು ವ್ಯಕ್ತವಾಗಿದೆ. ಹಿಂದೂ ಆಚಾರ ವಿಚಾರಗಳಿಗೆ ಆಡಳಿತ ಸರಕಾರವೇ ಅಡ್ಡಿಯನ್ನುಂಟು ಮಾಡುವುದು ತೀರಾ ದುರದೃಷ್ಟಕರ. ಧಾರ್ಮಿಕ, ವೈದಿಕ ವಿಧಿವಿಧಾನಗಳಲ್ಲಿ ಸರಕಾರ ಹಸ್ತಕ್ಷೇಪ ಸರ್ವತಾ ಒಪ್ಪತಕ್ಕದಲ್ಲ. ಆದ್ದರಿಂದ ಹಿಂದೂ ಧರ್ಮದ ಬಗ್ಗೆ ಆಳವಾಗಿ ಮನನ ಮಾಡಿಕೊಳ್ಳಬೇಕಾದ ಅಗತ್ಯ ಪ್ರತಿಯೊಬ್ಬರಿಗಿದೆ. ಹಿಂದುತ್ವದ ಬಗ್ಗೆ ಉತ್ತರಿಸಲು ಪ್ರತಿಯೊಬ್ಬ ಹಿಂದುವೂ ಶಕ್ತನಾಗಬೇಕು. ನಾನೊಬ್ಬ ಹಿಂದು ಎಂದು ಎದೆ ತಟ್ಟಿ ಹೇಳಬಲ್ಲವರು ಇಂದು ಸಮಾಜಕ್ಕೆ ಅಗತ್ಯ. ಸಾಗರದಂತಹ ಹಿಂದೂ ಶಾಸ್ತ್ರದ ಕುರಿತು ಕಿಂಚಿತ್ ಅರಿತುಕೊಂಡು ಸನ್ಮಾರ್ಗದಲ್ಲಿ ನಡೆದರೆ ಖಂಡಿತವಾಗಿಯೂ ನಾನೊಬ್ಬ ಹಿಂದು ಎಂದು ಅಭಿಮಾನದಿಂದ ಹೇಳಬಲ್ಲ. ನಿತ್ಯ ಜೀವನದಲ್ಲಿ ಶಿವತತ್ವವನ್ನು ರೂಢಿಸಿಕೊಳ್ಳಬೇಕು. ಪ್ರಪಂಚ ಚಕ್ರದ ಚಾಲನೆ ಸುಸ್ಥಿತಿಯಲ್ಲಿರಬೇಕಾದರೆ ಸಂಹಾರ ರೂಪಿ ರುದ್ರನ ಪೂಜೆ ಮಾಡಲೇಬೇಕು. ಪ್ರಕೃತಿಯ ಸಮತೋಲನ ಕಾಪಾಡಿಕೊಳ್ಳುವುದೇ ಶಿವಧರ್ಮ ಎನ್ನಬಹುದು. ಇಂದಿನ ಮಕ್ಕಳಿಗೆ ಸನಾತನ ಸಂಸ್ಕಾರ, ಪರಂಪರೆ ಕೊಡುವ ಕೆಲಸ ಇಂದಿನ ತುರ್ತ ಅಗತ್ಯ. ಇದರ ಕೊರತೆ ಎಲ್ಲೆಡೆ ಕಂಡು ಬರುತ್ತಿದೆ. ಇಂದಿನ ಮಕ್ಕಳೂ ಸಹ ಧನದಾಹಿಗಳಾಗುತ್ತಿದ್ದಾರೆ ಎಂದು ಚಿನ್ಮಯ ಮಿಷನ್ನ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಿ.ವಿ.ಪೆÇದುವಾಳ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ನ್ಯಾಯವಾದಿ ಎ.ಸಿ.ಅಶೋಕ್ ಕುಮಾರ್, ಸಿ.ಯಶವಂತ ಕಾಮತ್ ಬೆಂಗಳೂರು, ಶ್ರೀ ವಿಶ್ವಕರ್ಮ ಭಜನಾ ಸಂಘ ಅಧ್ಯಕ್ಷ ದಿವಾಕರ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಡಾ.ಶ್ರೀಪಾದ ರಾವ್, ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಅಧ್ಯಕ್ಷ ಸುರೇಶ್, ನಾಗರಕಟ್ಟೆ ಶ್ರೀ ಶಾರದಾಂಬಾ ಭಜನಾಶ್ರಮ ಅಧ್ಯಕ್ಷ ಚಂದ್ರಕಾಂತ, ಶ್ರೀ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ನಾಗೇಶ್ವರ ರಾವ್ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ಜ್ಯೋತಿಷ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ವಂದಿಸಿದರು. ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ಲಕ್ಷ್ಮೀಕಾಂತ ನೆಲ್ಲಿಕುಂಜೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಮತ್ತು ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.

