ಬದಿಯಡ್ಕ: ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ ಅಪಾರ ಕೊಡುಗೆಯನ್ನು ನೀಡಿದ ಮಹಾನ್ ನಾಯಕರಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅತ್ಯಂತ ಪ್ರಮುಖರು. ಅವರು ಭಾರತದಷ್ಟೇ ಅಲ್ಲದೆ ವಿಶ್ವ ಕಂಡ ಅತ್ಯಪೂರ್ವ ಧೀಮಂತ ವ್ಯಕ್ತಿ. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾದುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಸಹಕಾರಿ ಇಲಾಖೆಯ ಅಧಿಕಾರಿ ರವೀಂದ್ರ ಆನೆಮಜಲು ತಿಳಿಸಿದರು.
ಕಾಸರಗೋಡು ಜಿಲ್ಲಾ ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ಬಾರಡ್ಕದಲ್ಲಿ ನಡೆದ ಅಂಬೇಡ್ಕರ್ರ 128ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಅರ್ಥಶಾಸ್ತ್ರಜ್ಞನಾಗಿ, ಕಾನೂನು ತಜ್ಞರಾಗಿ, ರಾಜಕೀಯ ನೇತಾರರಾಗಿ, ದೀನ ದಲಿತರ ನಾಯಕರಾಗಿ, ಸಂವಿಧಾನ ಶಿಲ್ಪಿಯಾಗಿ ಸರ್ವರ ಗೌರವಾದರಗಳಿಗೆ ಪಾತ್ರರಾಗಿದ್ದ ಅಂಬೇಡ್ಕರ್ ದಮನಿತರಿಗೆ ದನಿ ಕೊಟ್ಟವರು ಎಂದು ಹೇಳಿದರು. ಅಂಬೇಡ್ಕರ್ ವಿಚಾರವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ರಾಮಚಂದ್ರ ಮಾರ್ಪನಡ್ಕ ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು. ಕೇರಳ ತುಳು ಅಕಾಡೆಮಿ ಸದಸ್ಯ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಚಂದ್ರಶೇಖರ ಬಿ., ನಾರಾಯಣ ಬಾರಡ್ಕ, ಸುರೇಖಾ ಬಾರಡ್ಕ, ಸತೀಶ್ ಅರ್ಲಡ್ಕ ಮಾತನಾಡಿದರು. ಪ್ರಕಾಶ ಎಂ.ಎಸ್. ಸ್ವಾಗತಿಸಿ, ಸುಂದರರ ಬಾರಡ್ಕ ವಂದಿಸಿದರು.


