ಬದಿಯಡ್ಕ: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿರುವ ಘಟನೆಯನ್ನು ತಡೆದ ಬಜರಂಗ ದಳದ ಕಾರ್ಯಕರ್ತರ ವಿರುದ್ಧ ಬದಿಯಡ್ಕ ಪೊಲೀಸರು ದಾಖಲಿಸಿರುವ ಸುಳ್ಳು ಕೇಸುಗಳನ್ನು ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ವಿಶ್ವಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ತಿಳಿಸಿದರು.
ಬುಧವಾರ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ರಿಗೆ ಮನವಿಯನ್ನು ನೀಡಿ ಮಾಧ್ಯಮದವರೊಡನೆ ಅವರು ಮಾತನಾಡಿದರು.
ಅಕ್ರಮವಾಗಿ ಗೋಸಾಗಾಟ ಮಾಡುವಾಗ ಅದನ್ನು ತಡೆದ ಪ್ರಕರಣವನ್ನು ಬದಿಯಡ್ಕ ಪೊಲೀಸರು ಬಜರಂಗ ದಳದ ಕಾರ್ಯಕರ್ತರಾದ ವಿಟ್ಲ ಪ್ರಖಂಡ ಸಂಚಾಲಕ ಅಕ್ಷಯ್ ರಜಪೂತ್ ಮತ್ತು ಇತರರ ಮೇಲೆ ದರೋಡೆ ಪ್ರಕರಣ ಎಂದು ಮೊಕದ್ದಮೆಯನ್ನು ದಾಖಲಿಸಿರುವುದು ಖಂಡನೀಯ. ಬದಿಯಡ್ಕ ಪೊಲೀಸರ ಈ ಕ್ರಮವನ್ನು ವಿಶ್ವಹಿಂದು ಪರಿಷತ್ ಬಲವಾಗಿ ವಿರೋಧಿಸುತ್ತದೆ. ತಕ್ಷಣ ಪೊಲೀಸ್ ಅಕಾರಿಗಳು ಭಜರಂಗದಳದ ಕಾರ್ಯಕರ್ತರ ಮೇಲೆ ಹಾಕಿದ್ದ ಕೇಸನ್ನು ವಾಪಸು ಪಡೆಯಲು ಆಗ್ರಹಿಸುತ್ತೇವೆ ಎಂದರು.
ಅಹಿತಕರ ಘಟನೆಗಳಿಗೆ ಅಕ್ರಮ ಗೋಸಾಗಾಟ, ಗೋಹತ್ಯೆ, ಗೋಕಳ್ಳತನ ಕಾರಣ :
ಕಳೆದ ಹಲವಾರು ವರ್ಷಗಳಿಂದ ಕರಾವಳಿ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಅಕ್ರಮ ಗೋಸಾಗಾಟ ಗೋಹತ್ಯೆ, ಗೋಕಳ್ಳತನ ಪ್ರಮುಖ ಕಾರಣವಾಗಿದ್ದು, ಈ ಅಕ್ರಮಗಳನ್ನು ತಡೆಯುವಲ್ಲಿ ಸರಕಾರ, ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇವರ ವಿಫಲತೆಯನ್ನೇ ಅಸ್ತ್ರವಾಗಿ ಬಳಸಿ ಗೋಕಳ್ಳರು ರಾಜಾರೋಷವಾಗಿ ಗೋಸಾಗಾಟ, ಗೋಹತ್ಯೆ, ಗೋಕಳ್ಳತನ ನಡೆಸುತ್ತಿದ್ದಾರೆ.
ನ್ಯಾಯ ನೀಡದಿದ್ದರೆ ರಸ್ತೆಗಿಳಿದು ಹೋರಾಟ :
ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆ, ಅಕ್ರಮ ಗೋಸಾಗಾಟ, ಗೋಕಳ್ಳತನಕ್ಕೆ ಕಡಿವಾಣ ಹಾಕದಿದ್ದರೆ ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಎಲ್ಲಾ ಹಿಂದೂ ಸಂಘಟನೆಗಳು ಗೋಪ್ರೇಮಿಗಳೊಂದಿಗೆ ನ್ಯಾಯ ಸಿಗುವ ತನಕ ರಸ್ತೆಗಿಳಿದು ಹೋರಾಟದ ಮುನ್ನೆಚ್ಚರಿಕೆಯನ್ನು ವಿಶ್ವಹಿಂದೂ ಪರಿಷತ್ ನೀಡುತ್ತಿದೆ ಎಂದು ಶರಣ್ ಪಂಪ್ವೆಲ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನೇತಾರರಾದ ರವೀಶ್ ತಂತ್ರಿ ಕುಂಟಾರು, ಭಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ಭಜರಂಗದಳ ಕಾಸರಗೋಡು ಜಿಲ್ಲಾ ಸಂಯೋಜಕ ಸುರೇಶ್ ಶೆಟ್ಟಿ ಪರಂಕಿಲ, ಬದಿಯಡ್ಕ ಭಜರಂಗದಳ ಸಂಯೋಜಕ ಸುನೀಲ್ ಶೆಟ್ಟಿ, ಭಾಸ್ಕರ ಬದಿಯಡ್ಕ, ಹರೀಶ್ ಸ್ಕಂದ, ಚಿತ್ತರಂಜನ್, ಪ್ರಸಾದ ಕನಕಪ್ಪಾಡಿ, ಶರತ್ ಶೆಟ್ಟಿ ವಳಮಲೆ, ರೂಪೇಶ ಶೆಟ್ಟಿ, ಅನಿಲ್ ಕುಟ್ಟ ಹಾಗೂ ಕಾರ್ಯಕರ್ತರು ಜೊತೆಗಿದ್ದರು.
ಅಭಿಮತ:
ಹಸುಗಳನ್ನು ಸಾಗಾಟ ಮಾಡಲು ಅನುಸರಿಸಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳದೆ, ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಸಾಗಾಟಮಾಡಿರುವುದನ್ನು ತಡೆದ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆಯನ್ನು ಹೂಡಿರುವುದು ಖಂಡನೀಯವಾಗಿದೆ. ಕೇರಳದಲ್ಲಿ ಅದೆಷ್ಟೋ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡವರ ವಿರುದ್ಧ ಬಲವಾದ ಸಾಕ್ಷಿಯಿದ್ದರೂ ಕ್ರಮ ಕೈಗೊಳ್ಳದೇ ಮೂಕ ಪ್ರಾಣಿಯಾದ ಗೋವಿನ ರಕ್ಷಣೆಗಿಳಿದ ಕಾರ್ಯಕರ್ತರ ಮೇಲೆ ದರೋಡೆ ಪ್ರಕರಣವನ್ನು ದಾಖಲಿಸಿರುವುದನ್ನು ಕೂಡಲೇ ಹಿಂಪಡೆಯದಿದ್ದಲ್ಲಿ ಪ್ರತಿಭಟನೆಯನ್ನು ಎದುರಿಸಬೇಕಾದೀತು.
- ರವೀಶ ತಂತ್ರಿ ಕುಂಟಾರು, ಹಿಂದೂ ನೇತಾರ

