ಬದಿಯಡ್ಕ: ಮೀನಾಡಿಪಳ್ಳ ಶ್ರೀ ವನದುರ್ಗಾ ಬಾಲಗೋಕುಲದ ನೇತೃತ್ವದಲ್ಲಿ 2ನೇ ವರ್ಷದ ಮನೆ ಮನೆ ರಾಮಾಯಣ ಪಾರಾಯಣ ಕಾರ್ಯಕ್ರಮಕ್ಕೆ ವನದುರ್ಗಾ ಬಾಲಗೋಕುಲದ ಕಾರ್ಯದರ್ಶಿ ಮೀನಾಡಿಪಳ್ಳ ಕುಮಾರರ ಮನೆಯಲ್ಲಿ ಚಾಲನೆಯನ್ನು ನೀಡಲಾಯಿತು.
ಬುಧವಾರ ಸಂಜೆ ಸಹಕಾರ ಭಾರತಿಯ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಕೆ.ಕರುಣಾಕರನ್ ನಂಬ್ಯಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ ಶ್ರೀರಾಮ ಹಾಗೂ ಶ್ರೀಕೃಷ್ಣರು ಅವತಾರ ಪುರುಷರಾಗಿ ಜನಿಸಿ ಎಲ್ಲರಿಂದ ಪೂಜಿಸಲ್ಪಡುತ್ತಿದ್ದಾರೆ. ದುಷ್ಟರಿಗೆ ಶಿಕ್ಷೆಯನ್ನು ನೀಡಿ ಶಿಷ್ಟರನ್ನು ರಕ್ಷಿಸುವ ಮೂಲಕ ಜಗತ್ತಿಗೇ ಪಾಠವನ್ನು ನೀಡಿದ್ದಾರೆ. ಅವರ ಜೀವನವನ್ನೇ ಆದರ್ಶವಾಗಿಟ್ಟುಕೊಂಡು ಸನಾತನ ಭಾರತೀಯ ಸಂಸ್ಕøತಿಗೆ ಪೂರಕವಾಗಿ ನಮ್ಮ ಜೀವನವನ್ನು ಮುಡಿಪಾಗಿಟ್ಟುಕೊಳ್ಳಬೇಕು. ಎಲ್ಲಾ ಮತದವರನ್ನೂ ಅತಿಥಿಗಳೆಂದು ಗೌರವಿಸುವ ಸಮಾಜದಲ್ಲಿ ಜನಿಸಿದ ನಾವು ಇಂದು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದೇವೆ. ಅನ್ಯಮತದವರ ಅತಿಕ್ರಮಣಕ್ಕೆ ನಾವು ಹಿಂಜರಿಯಬಾರದು. ಎಲ್ಲವನ್ನೂ ದಿಟ್ಟವಾಗಿ ಎದುರಿಸಿದ ಪುರಾಣಪುರುಷರು ನಮಗೆ ದಾರಿದೀಪವಾಗಿದ್ದಾರೆ. ಮನೆ ಮನೆಗಳಲ್ಲಿ ಮನ ಮನಗಳನ್ನು ಕರ್ಕಟಕ ಮಾಸದಲ್ಲಿ ಒಂದುಗೂಡಿಸುವ ಮೂಲಕ ಸಮಾಜದಲ್ಲಿ ಸಂಚಲನವನ್ನುಂಟುಮಾಡುವಂತಹ ಈ ಕಾರ್ಯಕ್ರಮವು ಇತರೆಡೆಗಳಿಗೂ ಮಾದರಿಯಾಗಿದೆ ಎಂದರು.
ಬಾಲಗೋಕುಲದ ಅಧ್ಯಕ್ಷ ಕುಞಂಬು ಮಾಸ್ತರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಈ ರೀತಿಯ ಕಾರ್ಯಚಟುವಟಿಕೆಗಳಿಂದ ಊರಿನಲ್ಲಿ ಒಗ್ಗಟ್ಟು ಜಾಗೃತವಾಗುವುದಲ್ಲದೆ, ಸಂಘಟನಾ ಶಕ್ತಿಯನ್ನು ಬಲಪಡಿಸುತ್ತದೆ. ಬಾಲಗೋಕುಲದ ಮೂಲಕ ಸನಾತನ ಸಂಸ್ಕøತಿಯ ಮಹತ್ವವನ್ನು ಉಣಬಡಿಸಲು ರಾಮಾಯಣ ಪಾರಾಯಣ ವೇದಿಕೆಯಾಗಿದೆ ಎಂದರು.
ಬಾಲಗೋಕುಲದ ಮಂಡಲ ಪ್ರಮುಖ್ ರಾಜೇಶ್ ಕುಮಾರ್ ಶಕ್ತಿನಗರ ಶುಭಾಶಂಸನೆಗೈದರು. ಕುಮಾರನ್ ಮೀನಾಡಿಪಳ್ಳ ಸ್ವಾಗತಿಸಿ, ಮನು ಶಕ್ತಿನಗರ ವಂದಿಸಿದರು. ಕೈದಪ್ಪುರಂ ಮಾಧವನ್ ನಂಬೂದಿರಿ ಪೆರ್ಲ ಅವರು ರಾಮಾಯಣ ಅರ್ಥ ಸಹಿತ ಪಾರಾಯಣವನ್ನು ನಡೆಸಿಕೊಟ್ಟರು.
ವಿಶೇಷತೆ:
ಮೀನಾಡಿಪಳ್ಳ ಶ್ರೀ ವನದುರ್ಗಾ ಬಾಲಗೋಕುಲದ ನೇತೃತ್ವದಲ್ಲಿ ಕಳೆದ ವರ್ಷವೂ 30ದಿನಗಳ ಕಾಲ ಊರಿನ 30 ಮನೆಗಳಲ್ಲಿ ರಾಮಾಯಣ ಪಾರಾಯಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತೀದಿನ 100-200ರ ತನಕ ಊರಿನ ಜನರು ಆಗಮಿಸುತ್ತಿದ್ದರು. ಮಕ್ಕಳಿಂದ ವೃದ್ಧರ ತನಕ ಎಲ್ಲರೂ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದರು.



