ಪೆರ್ಲ: ಭತ್ತದ ಕೃಷಿ ಉಳಿಸುವಿಕೆ ಬೆಳೆಸುವಿಕೆ, ಮುಂದಿನ ತಲೆಮಾರನ್ನು ಭತ್ತದ ಕೃಷಿಯತ್ತ ಆಕರ್ಷಿಸುವಿಕೆ, ಜಲ- ಜೈವ ವೈವಿಧ್ಯತೆಯ ಸಂರಕ್ಷಣೆ ಮುಂತಾದ ಉದ್ದೇಶಗಳನ್ನಿಟ್ಟು ಸ್ವರ್ಗ ಸಮೀಪದ ಬಜಕ್ಕುಡೆ ಕೊರಗಪ್ಪ ನಾಯ್ಕ ಇವರ ಬಯಲು ಗದ್ದೆಯಲ್ಲಿ ಭಾನುವಾರ ನಡೆದ "ಕೆಸರು ಗದ್ದೆಯಲ್ಲಿ ಒಂದು ದಿನ" ವಿಶೇಷ ಕಾರ್ಯಕ್ರಮ ಅಭೂತಪೂರ್ವವಾಗಿ ಜನರ ಮನಸೂರೆಗೊಂಡಿತು. ಸ್ವರ್ಗ ವಾರ್ಡು ಮಟ್ಟದ ಕುಟುಂಬಶ್ರೀ ಎ.ಡಿ.ಯಸ್ ನೇತೃತ್ವದಲ್ಲಿ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಹಾಗೂ ಮಾತೃಭೂಮಿ ಸ್ವರ್ಗ ಇದರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಿತು.
ಭಾನುವಾರ ಬೆಳಿಗ್ಗೆ ನಡೆದ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ ದೀಪ ಬೆಳಗಿಸಿ ಚಾಲನೆ ನೀಡಿದರು. ಗ್ರಾಮ ಪಂಚಾಯತಿ ಸಿ.ಡಿ.ಯಸ್ ಉಪಾಧ್ಯಕ್ಷೆ ಶಶಿಕಲಾ ಕೆ ಅಧ್ಯಕ್ಷತೆ ವಹಿಸಿದರು. ಪಂಚಾಯತಿ ಕುಟುಂಬಶ್ರೀ ಸದಸ್ಯ ಕಾರ್ಯದರ್ಶಿ (ಮೆಂಬರ್ ಸೆಕ್ರೆಟರಿ) ಅಬ್ದುಲ್ ಲತೀಪ್, ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ, ಶಿಕ್ಷಕ ಉದಯ ಸಾರಂಗ್, ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದ ಅಧ್ಯಕ್ಷ ರವಿರಾಜ್ ಸ್ವರ್ಗ, ಮಾತೃಭೂಮಿ ಸ್ವರ್ಗದ ಅಧ್ಯಕ್ಷ ಸುಬ್ಬಣ್ಣ ಸಿ. ಎಚ್ , ಕೃಷಿಕ ಪಿ.ಯಸ್ ಕಡಂಬಳಿತ್ತಾಯ ಪಂಬೆತ್ತಡ್ಕ ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ಭತ್ತದ ಕೃಷಿಕ ಕೊರಗಪ್ಪ ನಾಯ್ಕ ಬಜಕ್ಕುಡೆ ಅವರನ್ನು ಪಿ.ಯಸ್ ಕಡಂಬಳಿತ್ತಾಯರು ಸನ್ಮಾನಿಸಿದರು.ಮುಟ್ಟಾಳೆ ತೊಡಿಸಿ ,ಹಾರೆ ನೀಡುವುದರ ಮೂಲಕ ಸನ್ಮಾನಿಸಿದ್ದು ವಿಶೇಷವಾಗಿತ್ತು. ಅತಿಥಿ ಗಣ್ಯರನ್ನು ಪಾರಂಪರಿಕವಾದ ಎಲೆ-ಅಡಕೆ ನೀಡುವುದರ ಮೂಲಕ ಸ್ವಾಗತಿಸಲಾಯಿತು. ಎ.ಡಿ.ಯಸ್ ಕಾರ್ಯದರ್ಶಿ ಪ್ರೇಮ ಚೆನ್ನುಮೂಲೆ ಸ್ವಾಗತಿಸಿ, ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದ ಕಾರ್ಯದರ್ಶಿ ರಾಮಚಂದ್ರ ಯಂ ಕಾರ್ಯಕ್ರಮ ನಿರೂಪಿಸಿದರು. ಸಿಂಚನ ಪಂಬೆತ್ತಡ್ಕ ಮತ್ತು ಶಿವಾನಿ ಪಂಬೆತ್ತಡ್ಕ ಪ್ರಾರ್ಥನೆ ಹಾಡಿದರು. ಆಶಾ ಕಾರ್ಯಕರ್ತೆ ಚಂದ್ರಾವತಿ ಎ. ಟಿ ವಂದಿಸಿದರು.
ಬಳಿಕ ಗದ್ದೆಯಲ್ಲಿ ಮಕ್ಕಳಿಗೆ ಬಲೂನು ಒಡೆಯುವುದು, ಓಟ, ಮಹಿಳೆಯರಿಗೆ ಹಗ್ಗ ಜಗ್ಗಾಟ, ಲಿಂಬೆ ಚಮಚ ಓಟ, ರಿಲೇ, ಪುರುಷರಿಗೆ ಹಗ್ಗ ಜಗ್ಗಾಟ, ಬಲೂನು ಓಡೆಯುವುದು, ಓಟ, ರಿಲೇ ಸ್ಪರ್ಧೆಗಳು ನಡೆಯಿತು.
ಸಡಗರ ಸಂಭ್ರಮದಿಂದ ನಡೆದ ಕಾರ್ಯಕ್ರಮದಲ್ಲಿ ಜನರ ಉತ್ಸಾಹದ ಪಾಲ್ಗೊಳ್ಳುವಿಕೆಯು ಆಷಾಢ ಮಾಸದಲ್ಲಿ ಸ್ವರ್ಗದ ಬಾಗಿಲು ಮುಚ್ಚಿರುತ್ತದೆ ಎಂಬ ನಂಬಿಕೆಯನ್ನು ಹುಸಿಗೊಳಿಸಿ ನೈಜ ಸ್ವರ್ಗ ಸದೃಶ ಉತ್ಸಾಹ,ಜಾಗೃತಿ, ಖುಷಿ ನೀಡುವಲ್ಲಿ ಸಾಕಾರಗೊಂಡಿತು.