ಚಿಕ್ಕಮಗಳೂರು: ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿ, ತೀವ್ರ 48 ಗಂಟೆಗಳ ಕಾರ್ಯಾಚರಣೆಯ ಬಳಿಕ ಮಂಗಳೂರಿನ ಹೊಯ್ಗೆ ಬಜಾರ್ ನ ತೀರ ಪ್ರದೇಶದಲ್ಲಿ ಪತ್ತೆಯಾಗಿದ್ದ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ ಅವರ ಅಂತ್ಯ ಸಂಸ್ಕಾರ ಬುಧವಾರ ಸಂಜೆ ಹುಟ್ಟೂರು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚೇತನಹಳ್ಳಿಯ ಕಾಫಿ ಎಸ್ಟೇಟ್ ನಲ್ಲಿ ನಡೆಯಿತು.
ಸಿದ್ದಾರ್ಥ ಅವರ ಚಿತೆಗೆ ಪುತ್ರ ಅಮತ್ರ್ಯ ಅವರು ಅಗ್ನಿಸ್ಪರ್ಶ ಮಾಡುವ ಮೂಲಕ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕಿರಿಯ ಮಗ ಇಶಾನ್ ಅಣ್ಣನಿಗೆ ಜತೆ ಕೈಜೋಡಿಸಿದ್ದರು. ಸಿದ್ದಾರ್ಥ ಅಂತ್ಯಕ್ರಿಯೆಗೆ ಶ್ರೀಗಂಧ, ಹಲಸು, ಮಾವು, ಗರಿಕೆ ಬಳಕೆ ಮಾಡಲಾಗಿತ್ತು.
ಅಂತ್ಯಸಂಸ್ಕಾರಕ್ಕೂ ಮೊದಲು ಚಿಕ್ಕಮಗಳೂರಿನಲ್ಲಿ ಇಂದು ಮಧ್ಯಾಹ್ನ ಸಾರ್ವಜನಿಕರಿಗೆ ಸಿದ್ದಾರ್ಥ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪತ್ನಿ ಮಾಳವಿಕಾ, ಮಾವ ಎಸ್ ಎಂ ಕೃಷ್ಣ, ಅತ್ತೆ ಪ್ರೇಮಾ ಸಿದ್ದಾರ್ಥ ಪಾರ್ಥೀವ ಶರೀರದ ದರ್ಶನ ಪಡೆದಿದ್ದು, ಬಳಿಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ಶಾಸಕರಾದ ಆರ್.ಅಶೋಕ್, ಸಿಟಿ ರವಿ, ಕಾಂಗ್ರೆಸ್ ನ ಡಿಕೆ ಶಿವಕುಮಾರ್, ಶೃಂಗೇರಿ ಶಾಸಕ ರಾಜೇಗೌಡ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಸಾರ್ವಜನಿಕರು ಹಾಗೂ ಗಣ್ಯರು ಸಿದ್ದಾರ್ಥ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.