HEALTH TIPS

ಕಾಲಕ್ಕೆ ತಕ್ಕಂತೆ ಮುನ್ನಡೆಯುವ ಶಕ್ತಿ ಕವಿಗಿರುತ್ತದೆ-ವೆಂಕಟ್ ಭಟ್ ಎಡನೀರು-ಚುಟುಕು ಸಂಭ್ರಮದ ಸರ್ವಾಧ್ಯಕ್ಷರಾಗಿ ಅಭಿಮತ

 
      ಉಪ್ಪಳ: ಕಲೆ, ಸಾಹಿತ್ಯ ಪ್ರಕಾರಗಳು ಕಾಲಘಟ್ಟದ ಜನಜೀವನದ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ. ಕಲೆ, ಸಾಹಿತ್ಯಗಳ ಆಸಕ್ತಿಯಿಲ್ಲದವರ ಬದುಕು ಆಪ್ಯಾಯಮಾನವಾಗಿರಲಾರದು. ಆಸಕ್ತಿಯಿರುವವನಿಗೆ ಎಲ್ಲಿದ್ದರೂ ಸಾಹಿತ್ಯ ಸೇವೆಯ ಮೂಲಕ ಖುಷಿ ಕಾಣುವರು ಎಂದು ಪ್ರಸಿದ್ದ ವ್ಯಂಗ್ಯಚಿತ್ರ ಕಲಾವಿದ, ಸಾಹಿತಿ ವೆಂಕಟ್ ಭಟ್ ಎಡನೀರು ಅವರು ತಿಳಿಸಿದರು.
     ದಕ್ಷಿಣ ಕನ್ನಡ ಜಿಲ್ಲಾಚುಟುಕು ಸಾಹಿತ್ಯ ಪರಿಷತ್ತು ಮಂಗಳೂರು ಮತ್ತು ಸವಿ ಹೃದಯದ ಕವಿ ಮಿತ್ರರು ಪೆರ್ಲ ಕಾಸರಗೋಡು ಸಂಘಟನೆಗಳ ಜಂಟಿ ಆಶ್ರಯದಲ್ಲಿ ಶನಿವಾರ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುಟುಕು ಸಂಭ್ರಮ-2119 ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಬದುಕು ಎಣಿಸಿದಷ್ಟು ಸವ್ಯವಾಗಿ ಎಲ್ಲಾ ಸಂದರ್ಭದಲ್ಲೂ ಇರಲಾರದು. ಆದರೆ ಕವಿ-ಕಲಾವಿದ ಕಾಲಕ್ಕೆ ತಕ್ಕಂತೆ ಬದುಕನ್ನು ಮುನ್ನಡೆಸುವ ಸಾಮಥ್ರ್ಯ ಹೊಂದಿದವನಾಗಿದ್ದು, ಸಾಮಾಜಿಕ ಕಳಕಳಿಯಲ್ಲಿ ಎಲ್ಲರೊಡನೆ ಒಂದಾಗಿ ಯೋಗಿಯಂತೆ ತ್ಯಾಗಿಯಾಗುತ್ತಾನೆ ಎಂದು ಅವರು ಈ ಸಂದರ್ಭ ತಿಳಿಸಿದರು. ಪ್ರಸ್ತುತ ವ್ಯಂಗ್ಯಚಿತ್ರಗಳ ಸ್ಥಾನವನ್ನು ಚುಟುಕು ಸಾಹಿತ್ಯ ಪ್ರಕಾರ ಆವರಿಸಿಕೊಂಡಿದೆ. ಒಂದೇ ನೊಗದ ಜೋಡಿ ಹಸುಗಳಂತೆ ವ್ಯವಸ್ಥೆಯನ್ನು ತೀಡಿ-ತಿದ್ದುವ ಉತ್ತಮ ರಚನೆಗಳು ಯುವ ಹೃದಯಗಳಲ್ಲಿ ಹುಟ್ಟಿ ಸಾರಸ್ವತ ಲೋಕಕ್ಕೆ ಕೊಡುಗೆಯಾಗಬೇಕು ಎಂದು ಕರೆನೀಡಿದರು. ಚುಟುಕು ಸಾಹಿತ್ಯ ಸಂಭ್ರಮ ಗಡಿನಾಡಿನ ಭಾಷಾ ಶ್ರೀಮಂತಿಕೆಯ ದ್ಯೋತಕವಾಗಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
    ಚುಟುಕು ಸಾಹಿತ್ಯ ಸಂಭ್ರಮದ ಅಂತಿಮ ಭಾಗದಲ್ಲಿ ನಡೆದ ಚುಟುಕು ಗೋಷ್ಠಿಯನ್ನು ವೈದ್ಯ, ಸಾಹಿತಿ ಡಾ.ಸುರೇಶ ನೆಗಲಗುಳಿ ಉದ್ಘಾಟಿಸಿ ಚಾಲನೆ ನೀಡಿದರು. ಅವರು ಈ ಸಂದರ್ಭ ಮಾತನಾಡಿ, ಭೌಗೋಳಿಕರಣದ ಭಾಗವಾಗಿ ಸ್ಥಿತ್ಯಂತರಗೊಳ್ಳುತ್ತಿರುವ ಇಂದು ಸಾಹಿತ್ಯ ವಲಯವೂ ಪ್ರಭಾವಶಾಲಿಯಾಗಿ ವಿವಿಧ ವಿಭಾಗಗಳಲ್ಲಿ ಹರಡುತ್ತಿದೆ. ಇತರ ಭಾಷೆಗಳ ಗಾಢ ಪ್ರಭಾವ ಕನ್ನಡದ ಮೇಲೂ ಉಂಟಾಗಿದ್ದು, ಇತ್ತೀಚೆಗೆ  ಬೆಳವಣಿಗೆ ಪಡೆಯುತ್ತಿರುವ ಗಜಲ ಕಾವ್ಯ ಪ್ರಕಾರ ಅತ್ಯಂತ ಜನಜನಿತವಾಗುತ್ತಿದೆ ಎಂದು ತಿಳಿಸಿದರು. ಸರಳ-ಸುಂದರವಾಗಿ ರಚಿಸಲ್ಪಡುವ ಗಜಲ ಕಾವ್ಯ ಪ್ರಕಾರ ಕವಿತೆಗಳ ಆಸ್ವಾದಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದ್ದು, ಸಾಹಿತ್ಯ ಸಂಭ್ರಮದಂತಹ ಕಾರ್ಯಕ್ರಮಗಳಿಂದ ಕ್ರಿಯಾಶೀಲವಾಗಿರಲಿ ಎಂದು ಹಾರೈಸಿದರು.
    ಯುವ ಕವಿಗಳಾದ ಶಶಿಕಲಾ ಕುಂಬಳೆ, ಶ್ಯಾಮಲಾರವಿರಾಜ್ ಕುಂಬಳೆ, ಗೋಪಾಲಕೃಷ್ಣ ಭಟ್ ಗೋಳಿತ್ತಡ್ಕ, ಗುಣಾಜೆ ರಾಮಚಂದ್ರ ಭಟ್, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ಕೆ.ನರಸಿಂಹ ಭಟ್ ಏತಡ್ಕ, ಪುಷ್ಪಾ ಕೆ., ಅಭಿಲಾಷ್ ಪೆರ್ಲ, ರಿತೇಶ್ ಕಿರಣ್ ಕಾಟುಕುಕ್ಕೆ, ನಿರ್ಮಲಾ ಶೇಸಪ್ಪ ಖಂಡಿಗೆ, ಪ್ರೇಮ ಉದಯರಾಜ್ ಸುಳ್ಯ, ಮೌನೇಶ್ ಆಚಾರ್ಯ, ಜ್ಯೋಸ್ನ್ಸಾ ಎಂ.ಕಡಂದೇಲು, ಎನ್.ಸುಬ್ರಾಯ ಭಟ್, ಕೆ.ಎಸ್.ದೇವರಾಜ್ ಆಚಾರ್ಯ ಕುಂಬಳೆ, ಜುನೈದ್ ಕೊಡಗು, ಶಾಂತಾ ಪುತ್ತೂರು, ಪ್ರಭಾವತಿ ಕೆದಿಲಾಯ ಪುಂಡೂರು, ಜಯಾನಂದ ಪೆರಾಜೆ, ಸುಶೀಲಾ ಕೆ.ಪದ್ಯಾಣ, ರಾಮ.ವೈ.ಬಿ.ಏದಾರ್, ಸುರೇಖಾ ಉಳುವಾರ, ಪ್ರಮೀಳಾ ಚುಳ್ಳಿಕ್ಕಾನ ಸ್ವರಚಿತ ಕವನಗಳನ್ನು ವಾಚಿಸಿದರು. ಕವಿಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
      ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ತಾರಾನಾಥ ಬೋಳಾರ್, ನಿಕಟಪೂರ್ವ ಅಧ್ಯಕ್ಷ ಇರಾ ನೇಮು ಪೂಜಾರಿ, ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ, ಚೇತನಾ ಕುಂಬಳೆ, ರವಿಶಂಕರ ಜಿ.ಕೆ.ಕೆದಂಬಾಡಿ, ಹರೀಶ್ ಪೆರ್ಲ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಹರೀಶ್ ಸುಲಾಯ ಒಡ್ಡಂಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ಪುರುಷೋತ್ತಮ ಭಟ್ ಕೆ.ಸ್ವಾಗತಿಸಿ, ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.
       (ಚಿತ್ರ ಮಾಹಿತಿ: ಚುಟುಕು ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡುತ್ತಿರುವ ವೆಂಕಟ್ ಭಟ್ ಎಡನೀರು,2)ಕವಿಗೋಷ್ಠಿ ಉದ್ಘಾಟಿಸಿ ಮಾತನಾಡುತ್ತಿರುವ ಡಾ.ಸುರೇಶ್ ನೆಗಲಗುಳಿ,3)ಕವಿಗೋಷ್ಠಿಯಲ್ಲಿ ಗಮನ ಸೆಳೆವಂತೆ ಕವಿತೆ ವಾಚಿಸುತ್ತಿರುವ ಹಿರಿಯ ಕವಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್.)
            

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries