ನವದೆಹಲಿ: ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ 83 ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ತಂಡಗಳನ್ನು ನಾಲ್ಕು ಪ್ರವಾಹ ಪೀಡಿತ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ಕರ್ನಾಟಕ ಮತ್ತು ಗುಜರಾತ್ಗಳಿಗೆ ರವಾನಿಸಲಾಗಿದೆ ಎಂದು ಗೃಹ ಸಚಿವಾಲಯ ಶುಕ್ರವಾರ ತಿಳಿಸಿದೆ.
ದೇಶದ ವಿವಿಧ ಭಾಗಗಳಲ್ಲಿನ ಪ್ರಸ್ತುತ ಪ್ರವಾಹ ಪರಿಸ್ಥಿತಿ ಮತ್ತು ಅದನ್ನು ಎದುರಿಸಲು ಕೇಂದ್ರ ಸಚಿವಾಲಯಗಳು ಮತ್ತು ಏಜೆನ್ಸಿಗಳ ಸನ್ನದ್ಧತೆಯನ್ನು ಕೇಂದ್ರ ಗೃಹ ಸಚಿವ ನಿತ್ಯಾನಂದ್ ರಾಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪರಿಶೀಲಿಸಲಾಯಿತು.
ನಾಲ್ಕು ಪ್ರವಾಹ ಪೀಡಿತ ರಾಜ್ಯಗಳ ಹೆಚ್ಚು ಹಾನಿಗೊಂಡ ಪ್ರದೇಶಗಳಲ್ಲಿ ಅಗತ್ಯವಿರುವ ಎಲ್ಲ ಸಲಕರಣೆಗಳೊಂದಿಗೆ 83 ಎನ್ಡಿಆರ್ಎಫ್ ತಂಡಗಳನ್ನು ಇರಿಸಲಾಗಿದೆ ಎಂದು ಎನ್ಡಿಆರ್ಎಫ್ ಮಹಾನಿರ್ದೇಶಕರು ಸಭೆಯಲ್ಲಿ ತಿಳಿಸಿದ್ದಾರೆ ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ. ಈ ತಂಡಗಳು ಸೇನೆ, ನೌಕಾಪಡೆ, ವಾಯುಪಡೆ ಮತ್ತು ಕೋಸ್ಟ್ ಗಾರ್ಡ್ನ 173 ತಂಡಗಳಿಗೆ ಹೆಚ್ಚುವರಿಯಾಗಿದ್ದು ಒಂದು ತಂಡದಲ್ಲಿ ಸುಮಾರು 45 ಸಿಬ್ಬಂದಿಗಳನ್ನು ಒಳಗೊಂಡಿದೆ.
ಅಪಾಯ ಮಟ್ಟದಲ್ಲಿ ನೇತ್ರಾವತಿ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಯಿಂದ ತೊಂದರೆಗೊಳಗಾಗಬಾದೆಂದೂ ನೇತ್ರಾವತಿ ನದಿಯ ದಡದಲ್ಲಿ ವಾಸಿಸುವ ಜನರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಶುಕ್ರವಾರ ಮಧ್ಯಾಹ್ನ ಈ ಎಚ್ಚರಿಕೆ ಸಂದೇಶ ಹೊರಡಿಸಿದ್ದಾರೆ. . "ಉಪ್ಪಿನಂಗಡಿಯಿಂದ ಮಂಗಳೂರಿನವರೆಗೆ ನೇತ್ರಾವತಿ ನದಿಯ ದಡದಲ್ಲಿ ವಾಸಿಸುವವರು ತಮ್ಮ ಕುಟುಂಬಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ಹೋಗಬೇಕು" ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇನ್ನೊಂದೆಡೆ ಭಾರೀ ಮಳೆಯ ಕಾರಣ ಮಂಗಳುರು-ಸಕಲೇಶಪುರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿತವಾಗಿದ್ದು ಸಂಚಾರ ಬಂದ್ ಆಗಿದೆ
ಮಳೆಗೆ ಜೋಗದಲ್ಲಿನ "ಬಾಂಬೆ ಬಂಗ್ಲೆ" ನೆಲಸಮ?
ಮಲೆನಾಡಿನಲ್ಲಿ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರಖ್ಯಾತ ಜೋಗ ಜಲಪಾತದ ಪಕ್ಕದಲ್ಲಿರುವ ಐತಿಹಾಸಿಕ ಬಾಂಬೆ ಬಂಗ್ಲೆ ಕುಸಿತವಾಗುವ ಸಾಧ್ಯತೆ ಇದೆ. ಬ್ರಿಟೀಷರ ಕಾಲದ ಈ ಕಟ್ಟಡದಿಂದ ಒಂದು ಕಾಲದಲ್ಲಿ ಜೋಗದ ನಾಲ್ಕು ಕವಲುಗಳಾದ ರಾಜಾ, ರಾಣಿ, ರೋರರ್ ಹಾಗೂ ರಾಕೆಟ್ ಮೇಲಿಂದ ತಳದತ್ತ ಬೀಳುವುದನ್ನು ನೋಡುವುದೇ ಒಂದು ಆಕರ್ಷಣೆ ಆಗಿತ್ತು.


