ಬದಿಯಡ್ಕ: ಸ್ನೇಹಾಲಯದ ವೃದ್ಧ ಮಾತೆಯರೊಂದಿಗೆ ಓಣಂ ಸಂಭ್ರಮವನ್ನು ಆಚರಿಸಿ ಬದಿಯಡ್ಕ ಗ್ರಾಮಪಂಚಾಯತಿ ಆಶಾಕಾರ್ಯಕರ್ತೆಯರು ತಮ್ಮ ಮಾತೃತ್ವವನ್ನು ತೋರ್ಪಡಿಸಿದ್ದಾರೆ. ಊರಿನ ಜನತೆಯ ಕಷ್ಟವನ್ನರಿತು ಅವರಿಗೆ ಅಗತ್ಯವುಳ್ಳ ಸೌಲಭ್ಯವನ್ನು ಒದಗಿಸುವಲ್ಲಿ ಆಶಾಕಾರ್ಯರ್ತೆಯರು ಶ್ರಮವಿದೆ ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಬದಿಯಡ್ಕ ಗ್ರಾಂಡ್ ಪ್ಲಾಜಾ ಸಭಾಂಗಣದಲ್ಲಿ ಶನಿವಾರ ಬದಿಯಡ್ಕ ಗ್ರಾಮಪಂಚಾಯಿತಿ ಆಶಾಕಾರ್ಯಕರ್ತೆಯರ ಓಣಂ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಶಾಕಾರ್ಯಕರ್ತೆಯರಿಗೆ ವೈಯಕ್ತಿಕವಾಗಿ ಸಮವಸ್ತ್ರವನ್ನು ನೀಡುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಸೈಬುನ್ನೀಸ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾಭ್ಯಾಸ ಹಾಗೂ ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಶುಭಾಶಂಸನೆಗೈದು ಮಾತನಾಡಿ ಗ್ರಾಮಪಂಚಾಯಿತಿ ಸದಸ್ಯರಿಗಿಂತ ಹೆಚ್ಚು ಜನರನ್ನು ಅತೀ ಹತ್ತಿರದಿಂದ ಬಲ್ಲವರಾದ ಆಶಾಕಾರ್ಯರ್ತೆಯರ ಮಾಸಿಕ ಭತ್ತೆಯನ್ನು ಹೆಚ್ಚಿಸಬೇಕಿದೆ. ಆರೋಗ್ಯ ಇಲಾಖೆಯಲ್ಲಿ ಅವರ ಪಾತ್ರ ಮಹತ್ತರ ಎಂದರು. ಗ್ರಾಮಪಂಚಾಯಿತಿ ಸದಸ್ಯರುಗಳಾದ ಮುನೀರ್, ಶಾಂತಾ ಬಾರಡ್ಕ, ವಿಶ್ವನಾಥ ಪ್ರಭು, ಸಿರಾಜ್ ಮುಹಮ್ಮದ್, ಮಾಜಿ ಗ್ರಾ.ಪಂ.ಅಧ್ಯಕ್ಷ ಮಾಹಿನ್ ಕೇಳೋಟ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶುಭಹಾರೈಸಿದರು. ಬದಿಯಡ್ಕ ಅಸೀಸಿ ಸ್ನೇಹಾಲಯದ ವೃದ್ಧ ಮಾತೆಯರನ್ನು ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಉಡುಗೊರೆಗಳನ್ನು ನೀಡಿ ಗೌರವಿಸಿದರು. ಸಾಜಿದಾ ಸ್ವಾಗತಿಸಿ, ಲೀಲಾವತಿ ಕನಕಪ್ಪಾಡಿ ನಿರೂಪಿಸಿದರು. ಸುಮತಿ, ಸುಜಾತ, ಶಾಲಿನಿ ಪ್ರಾರ್ಥನೆಯನ್ನು ಹಾಡಿದರು. 25ಮಂದಿ ಆಶಾಕಾರ್ಯರ್ತೆಯರು ಒಟ್ಟು ಸೇರಿ ಆಕರ್ಷಕವಾದ ಹೂವಿನ ರಂಗೋಲಿಯನ್ನು ರಚಿಸಿದ್ದರು. ಮಧ್ಯಾಹ್ನ ಓಣಂ ಭೋಜನವನ್ನು ಏರ್ಪಡಿಸಲಾಗಿತ್ತು.


