ಬದಿಯಡ್ಕ : ಚೆಂಗಳ ಗ್ರಾಮ ಪಂಚಾಯಿತಿ ಮಟ್ಟದ ದ್ವಿದಿನ ಸಹವಾಸ ಶಿಬಿರವು ಕಲ್ಲಕಟ್ಟ ಮಜದೂರರ ಅನುದಾನಿತ ಹಿರಿಯ ಪ್ರಾಥಮಿಕ (ಯಂ.ಎ.ಯು.ಪಿ.) ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಹಾಗೂ ಶನಿವಾರ ಜರಗಿತು. ಮಕ್ಕಳ ಸೃಜನಾತ್ಮಕ ಬೆಳವಣಿಗೆ, ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿಕೆ ಇತ್ಯಾದಿಗಳು ಶಿಬಿರದ ಉದ್ದೇಶಗಳಾಗಿದ್ದವು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು, ಅಧ್ಯಾಪಕರು, ಚೆಂಗಳ ಗ್ರಾಮ ಪಂಚಾಯಿತಿ ಸದಸ್ಯರು ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಶಿಬಿರದಲ್ಲಿ ಜೀವ ವೈವಿಧ್ಯ ಚಟುವಟಿಕೆಯಲ್ಲಿ ರಾಜು ಕಿದೂರ್ ಮತ್ತು ಮುರಳಿ ಮಾಧವ ಇವರ ಮುಂದಾಳತ್ವದಲ್ಲಿ ಪಕ್ಷಿವೀಕ್ಷಣಾ ಕಾರ್ಯಕ್ರಮ ನಡೆಯಿತು. ಪರಿಸರ ನಡಿಗೆಯ ಮೂಲಕ ಹಲವು ಪಕ್ಷಿಗಳನ್ನು, ಚಿಟ್ಟೆಗಳನ್ನು ವಿವಿಧ ರೀತಿಯ ಚಿಕ್ಕ ಜೀವಿಗಳನ್ನು ಮಕ್ಕಳು ನಿರೀಕ್ಷಿಸಿದರು.
ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ನಡೆದ ಯಕ್ಷಗಾನ ಕಾರ್ಯಕ್ರಮವು ನೋಡುಗರ ಮನ ಸೆಳೆಯಿತು. ರಾತ್ರಿ ಶಂಕರ ಸ್ವಾಮಿಕೃಪಾ ಮತ್ತು ಬಳಗದಿಂದ ಜಾನಪದ ಕಾರ್ಯಕ್ರಮ ನಡೆಯಿತು.
ಶನಿವಾರದಂದು ಲಿಮ್ಕಾ ಪ್ರಶಸ್ತಿ ವಿಜೇತ ಶಿಕ್ಷಕ ದಿನೇಶ್ ಕುಮಾರ್ ತೆಕ್ಕುಂಬಾಡಂ ಇವರಿಂದ ವಿಜ್ಞಾನದ ಸರಳ ಪ್ರಯೋಗಗಳು ಮಕ್ಕಳ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಜಿ.ಎಲ್.ಪಿ.ಯಸ್. ಪಿಲಾಂಕಟ್ಟೆ ಶಾಲೆಯ ಶಿಕ್ಷಕರಾದ ಉದಯನ್, ಸಜಿ ಮೊದಲಾದವರು ಸಹಕರಿಸಿದರು. ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಮತ್ತು ಉಪಜಿಲ್ಲಾ ವಿಧ್ಯಾಧಿಕಾರಿ ಅಗಸ್ಟಿನ್ ಬರ್ನಾಡ್ ಅವರು ಶಿಬಿರವನ್ನು ವೀಕ್ಷಿಸಿ ಶುಭಹಾರೈಸಿದರು. ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ರುಚಿಕರವಾದ ಉಪಹಾರ ಹಾಗೂ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಮಪ್ರಸಾದ್ ಸ್ವಾಗತಿಸಿದರು. ಶಾಲಾ ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘ, ಮಾತೃಸಂಘ, ಹಳೆ ವಿದ್ಯಾರ್ಥಿಗಳು ಸಹಕರಿಸಿದರು.