ಉಪ್ಪಳ: ನಿರಂತರ ಅಪಘಾತಗಳಿಂದ ಬೆದರಿಕೆಯಾಗಿದ್ದ ಮಣ್ಣಂಗುಳಿ ಮಸೀದಿ ಬಳಿಯ ರಸ್ತೆಗೆ ಸಾರ್ವಜನಿಕರ ಬಹುಕಾಲದ ಬೇಡಿಕೆಯಂತೆ ಕೊನೆಗೂ ವೇಗನಿಯಂತ್ರಕ ಹಂಪ್ಸ್ ಗಳ ನಿರ್ಮಾಣ ಆರಂಭಗೊಂಡಿದೆ.
ಕೈಕಂಬ-ಬಾಯಾರು ರಸ್ತೆಯ ಮಣ್ಣಂಗುಳಿಯ ಮಸೀದಿ ಬದಿ ನೇರರಸ್ತೆ ವಾಹನಗಳ ದಟ್ಟಣೆಗೆ ಅಗಲ ಕಿರಿದಾಗಿ ಇಕ್ಕಟ್ಟಾಗಿ ಸಮಸ್ಯೆಗೆ ಕಾರಣವಾಗುತ್ತಿತ್ತು. ಇದರಿಂದ ಹಲವು ಅಪಘಾತಗಳೂ, ಜೀವಹಾನಿಗಳೂ ಈ ಹಿಂದೆ ಸಂಭವಿಸಿತ್ತು. ಸಮಸ್ಯೆಯ ಪರಿಹಾರಕ್ಕೆ ಬ್ಯಾರಿಕೇಡ್ ಗಳನ್ನು ನಿರ್ಮಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ರಸ್ತೆಯುಬ್ಬು ನಿರ್ಮಿಸಲು ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ರಸ್ತೆಯುಬ್ಬು ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಈ ಪರಿಸರದಲ್ಲಿ ಮಸೀದಿ, ಮದ್ರಸ, ಶಾಲೆಗಳಿದ್ದು, ವಾಹನಗಳ ಭರಾಟೆಯಿಂದ ಅಗಲ ಕಿರಿದಾದ ರಸ್ತೆಯಲ್ಲಿ ಸಂಕಷ್ಟಗಳು ದಿನನಿತ್ಯವೆಂಬಂತೆ ಜನರನ್ನು ಹೈರಾಣಗೊಳಿಸುತ್ತಿತ್ತು. ಈ ಪರಿಸರದ ಒಂದೂವರೆ ಕಿಲೋಮೀಟರ್ ಗಳಷ್ಟು ವ್ಯಾಪ್ತಿಯಲ್ಲಿ ಹಲವು ಅಪಘಾತಗಳು ಈಗಾಗಲೇ ನಡೆದಿದ್ದು, ಈ ಕಾರಣದಿಂದ ಶಾಶ್ವತ ಪರಿಹಾರಕ್ಕೆ ಆಗ್ರಹಿಸಲಾಗಿತ್ತು. ಇದೀಗ ಎರಡು ಕಡೆಗಳಲ್ಲಿ ರಸ್ತೆಯುಬ್ಬುಗಳನ್ನು ನಿರ್ಮಿಸಲಾಗುತ್ತಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.


