ಇಡುಕ್ಕಿ: ರಾಜ್ಯಾದ್ಯಂತ ಪ್ರಸ್ತುತ ಹಲವು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಉತ್ತರ ಭಾರತೀಯ ಕಾರ್ಮಿಕರ ದಕ್ಷಿಣ ಭಾರತದ ಮೊದಲ ಸಂಘಟನೆಯೊಂದು ಕೇರಳದಲ್ಲಿ ಹುಟ್ಟಿಕೊಳ್ಳುವ ಮೂಲಕ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಅಸ್ಸಾಂ ಮೂಲದ ಡೇವಿಡ್ ಎಂಬವರು ಸಂಘಟನೆ ರಚನೆಗೆ ನೇತೃತ್ವ ವಹಿಸಿದ್ದು, ಇಡುಕ್ಕಿ ಕಟ್ಟಪ್ಪಣ ಎಂಬಲ್ಲಿ ಬುಧವಾರ ಮೊದಲ ಸಭೆ ನಡೆಯಿತು. ಕಳೆದ ಹದಿಮೂರು ವರ್ಷಗಳಿಂದ ಇಡುಕ್ಕಿಯ ಪಂಡಲ್ಮೇಡ್ ಎಸ್ಟೇಟ್ ವೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿರುವ ಡೇವಿಡ್ ಹಲವು ವರ್ಷಗಳ ತನ್ನ ಕನಸನ್ನು ಕೊನೆಗೂ ನನಸಾಗಿಸಿದ್ದಾರೆ.
ಯಾವುದೇ ರಾಜಕೀಯ ಪಕ್ಷ, ಮತ ಸಂಘಟನೆಗಳಲ್ಲಿ ಒಳಗೊಳ್ಳದೆ ಉತ್ತರ ಭಾರತದ ಎಲ್ಲಾ ವರ್ಗಗಳ ಕಾರ್ಮಿಕರು ಒಗ್ಗಟ್ಟಾಗಿ ತಮ್ಮ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘಟನೆ ರೂಪಿಸಲು ಯೋಜಿಸಿರುವುದಾಗಿ ಡೇವಿಡ್ ತಿಳಿಸುತ್ತಾರೆ. ಹಿಂದಿ ವರ್ಕರ್ಸ್ ಮೀಟಿಂಗ್ ಎಂದು ತಮ್ಮ ಸಂಘಟನೆಗೆ ಹೆಸರಿಡಲಾಗಿದ್ದು, ಸಂಘಟನೆಯನ್ನು ಇನ್ನಷ್ಟು ಬಲಪಡಿಸಲಾಗುವುದೆಮದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿರುವುದಾಗಿ ತಿಳಿದುಬಂದಿದೆ.
ಕೇರಳದಾದ್ಯಂತ ಇತ್ತೀಚೆಗಿನ ವರ್ಷದಲ್ಲಿ ವ್ಯಾಪಕ ಪ್ರಮಾಣದಲ್ಲಿ ನಗರ-ಹಳ್ಳಿಗಳ ಮೂಲೆಮೂಲೆಯಲ್ಲಿ ಕಾರ್ಮಿಕರಾಗಿ ಕಂಡುಬರುತ್ತಿದ್ದು, ಜೊತೆಗೆ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದೂ ಇತ್ತೀಚೆಗೆ ಭಾರೀ ಚರ್ಚೆಯಾಗುತ್ತಿದೆ. ಈ ಮಧ್ಯೆ ಸಂಘಟನೆ ರೂಪೀಕರಣಗೊಂಡಿರುವುದು ಕುತೂಹಲ ಮೂಡಿಸಿದೆ. ಜೊತೆಗೆ ಉತ್ತರ ಭಾರತೀಯರನ್ನು ಅತಿಯಾಗಿ ದುಡಿಸುವುದು, ಕಡಿಮೆ ಸಂಬಳ ನೀಡುವುಸದು, ವಸತಿ, ಚಿಕಿತ್ಸೆಗೆ ಸರಿಯಾದ ವ್ಯವಸ್ಥೆ ಕಲ್ಪಿಸದಿರುವುದು ಮೊದಲಾದ ಸಮಸ್ಯೆಗಳಿಗೆ ಪರಿಹಾರ ಕಾಣುವಲ್ಲಿ ನ್ಯಾಯಯುತ ಮಾರ್ಗೋಪಾಯಗಳ ಬಗ್ಗೆ ಸಂಘಟನೆ ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ಸಭೆ ಚರ್ಚಿಸಿದೆ.
ಸಭೆಯಲ್ಲಿ ಹಿಂದಿ, ಬಂಗಾಳಿ, ನೇಪಾಳಿ, ಅಸ್ಸಾಮೀಸ್, ಒಡಿಸ್ಸಿ, ಸಹಿತ ಉತ್ತರ ಭಾರತದ ಇತರ ಭಾಷಿಗರು, ತಮಿಳು ಮಲೆಯಾಳಿಗರೂ ಭಾಗವಹಿಸಿದ್ದರು. ಸಭೆಯ ಆರಂಭದಲ್ಲಿ ವಿವಿಧ ಭಾಷೆಗಳಲ್ಲಿ ಸ್ವಾಗತಗೀತೆ ಹಾಡಿರುವುದು ವಿಶೇಷವಾಗಿತ್ತು.
ಸಭೆಯನ್ನು ಶಾಶಕ ರೋಶಿ ಅಗಸ್ಟಿನ್ ಅವರ ಮಲೆಯಾಳ ಭಾಷೆಯ ಭಾಷಣವನ್ನು ಹಿಂದಿಗೆ ಭಾಷಾಂತರಿಸುವ ವ್ಯವಸ್ಥೆ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ರಾಜ್ಯದ ಇತರೆಡೆಗಳಲ್ಲಿ ಶಾಖೆಗಳನ್ನು ಆರಂಭಿಸಲಾಗುವುದೆಂದು ಡೇವಿಡ್ ತಿಳಿಸಿರುವರು.


