ಬದಿಯಡ್ಕ: ಕಲಾ ಪ್ರಕಾರಗಳಲ್ಲಿ ಮೇರುಸ್ಥಾನವನ್ನು ಹೊಂದಿರುವ ಸಂಗೀತವು ಕಲಾರಾಧನೆಯ ಮೇರುತ್ವವನ್ನು ಹೊಂದಿರಲು ಅದರ ಶಾಸ್ತ್ರೀಯತೆಯೆ ಪ್ರಮುಖ ಕಾರಣವಾಗಿದೆ. ಸೃಷ್ಟಿಯ ಮೂಲ ತತ್ವವಾದ ನಾದ ಕಾಲಾನುಕ್ರಮದಲ್ಲಿ ಬೆಳೆದುಬಂದು ಸಂಗೀತ ಕಲಾಲೋಕವನ್ನು ಸೃಷ್ಟಿಸಿದ್ದು, ಮನಸ್ಸಿನ ಸ್ಥಾಯೀ ಭಾವವನ್ನು ತಿಳಿಗೊಳಿಸಿ ಗುಣಾತ್ಮಕ ಮನೋಸ್ಥಿತಿಯ ಕಾಪಿಡುವಿಕೆಯಲ್ಲಿ ನೆರವಾಗುವ ಜೊತೆಗೆ ಕ್ರಿಯಾತ್ಮಕಗೊಳಿಸುತ್ತದೆ ಎಂದುದಿ.ಗೋಪಾಲಕೃಷ್ಣ ಮಣೊಳಿತ್ತಾಯ ಸಂಸ್ಮರಣ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್ ಎ. ಅವರು ತಿಳಿಸಿದರು.
ಸಂಗೀತ ವಿದ್ವಾನ್. ದಿ. ಗೋಪಾಲಕೃಷ್ಣ ಮಣೊಳಿತ್ತಾಯ ಸಂಸ್ಮರಣಾ ಸಮಿತಿ ನೇತೃತ್ವದಲ್ಲಿ ಬುಧವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆದ ಗೋಪಾಲಕೃಷ್ಣ ಮಣೊಳಿತ್ತಾಯರ ಸಂಸ್ಮರಣೆ ಮತ್ತು ಸಂಗೀತಾರಾಧನೆ ಸಮಾರಂಭದ ಅಂಗವಾಗಿ ಅಪರಾಹ್ನ ನಡೆದ ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊಸ ತಲೆಮಾರಲ್ಲಿ ಸಂಗೀತದ ಆಸಕ್ತಿ, ಕಲಿಯುವ ಉತ್ಸಾಹವನ್ನು ಹುಟ್ಟುಹಾಕುವಲ್ಲಿ ಹಿರಿಯ ತಲೆಮಾರಿನ ಅಹರ್ನಿಶಿ ಪ್ರಯತ್ನ ಮತ್ತು ತ್ಯಾಗಗಳ ಇತಿಹಾಸ ನಮ್ಮ ಎದುರಿಗಿದೆ. ಈ ಹಿನ್ನೆಲೆಯಲ್ಲಿ ವಿದ್ವಾನ್ ಬಾಬು ರೈಯವರಂತಹ ಮೇರು ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಅವರು ಕಲಾಕ್ಷೇತ್ರಕ್ಕೆ ಧಾರೆಯೆರೆದ ಜ್ಞಾನ ಪರಂಪರೆಯ ಪರಿಚಯಿಸುವಿಕೆಯಿಂದ ಧನ್ಯರಾಗುತ್ತೇವೆ ಎಂದು ಅವರು ಈ ಸಂದರ್ಭ ತಿಳಿಸಿದರು. ಸೌಕರ್ಯ, ಅನುಕೂಲತೆಗಳ ಪ್ರತಿಕೂಲತೆಯ ಮಧ್ಯೆ ಬಾಬು ರೈಗಳು ಮೃದಂಗ ವಾದನದ ಉನ್ನತ ಶಿಕ್ಷಣವನ್ನು ಕರಗತಗೊಳಿಸಿ ಶಿಷ್ಯಪರಂಪರೆಯನ್ನು ಸೃಸ್ಟಿಸುವ ಮೂಲಕ ಮೇಲ್ಪಂಕ್ತಿಯನ್ನು ಒದಗಿಸಿದ್ದು, ಅವರನ್ನು ಅಭಿನಂದಿಸುವುದು ಪುಣ್ಯಕರವಾದುದು ಎಂದು ಅವರು ಈ ಸಂದರ್ಭ ತಿಳಿಸಿದರು. ಸಂಸ್ಕøತ ವಿದ್ವಾಂಸರಾಗಿ, ಶಿಕ್ಷಕರಾಗಿ ಸಂಗೀತ ಕಲಾಕ್ಷೇತ್ರದ ಅಪರಿಮಿತ ಜ್ಞಾನವನ್ನು ಉಪಾಸನೋಪಾದಿಯಲ್ಲಿ ಸಮಾಜಕ್ಕೆ ನೀಡಿದ ದಿ.ಮಣೊಳಿತ್ತಾಯರು ಎಂದಿಗೂ ಪೂಜನೀಯರು. ಅನೇಕ ಶಿಷ್ಯರನ್ನು ತಯಾರುಗೊಳಿಸಿ ಕಲಾ ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿರುವ ಅವರ ಕಲಾ ತಪಸ್ವಿ ನೆಲೆಯ ಸಾಧನೆಗಳು ಮಾದರಿಯಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಹಿರಿಯ ಮೃದಂಗ ವಿದ್ವಾನ್ ಬಾಬು ರೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಫ್ರೌಢಶಾಲಾ ಮುಖ್ಯೋಪಾಧ್ಯಾಯ ವೆಂಕಟ್ರಾಜ ಸಿ.ಎಚ್., ಪ್ರಾಂಶುಪಾಲ ಶಿವಪ್ರಕಾಶ್ ಎಂ.ಕೆ., ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ರೈ, ನೀರ್ಚಾಲು ಆರಾಧನಾ ಸಂಗೀತ ಶಾಲೆಯ ಶಿಕ್ಷಕಿ ವಿದುಷಿಃ ವಿಜಯಾ ಪ್ರಕಾಶ್ ಉಪಸ್ಥಿತರಿದ್ದು ಶುಭಹಾರೈಸಿದರು. ವಿದ್ವಾನ್ ಪ್ರಭಾಕರ ಕುಂಜಾರು ಸಹಕರಿಸಿದರು. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ನಿರೂಪಿಸಿದರು.
ಬೆಳಿಗ್ಗೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಉದ್ಘಾಟಿಸಿದರು. ಬಳಿಕ ಮಣೋಳಿತ್ತಾಯರ ಶಿಷ್ಯವೃಂದ ಮತ್ತು ಅಭಿಮಾನಿಗಳಿಂದ ಸಂಗೀತಾರಾಧನೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ವಾನ್.ಬಳ್ಳಾರಿ ರಾಘವೇಂದ್ರ ಅವರ ಹಾಡುಗಾರಿಕೆಯ ಕಚೇರಿ ನಡೆಯಿತು. ವಿದ್ವಾನ್. ಗಣರಾಜ ಕಾರ್ಲೆ(ಪಿಟೀಲು), ವಿದ್ವಾನ್ ಅನಿಲ್ ವಡಗರ(ಮೃದಂಗ), ವಿದ್ವಾನ್ ರಾಜೀವ್ ಗೋಪಾಲ್ ವೆಳ್ಳಿಕ್ಕೋತ್(ಮೋರ್ಸಿಂಗ್)ನಲ್ಲಿ ಸಹಕರಿಸಿದರು.



