ಪತ್ತನಂತಿಟ್ಟು: ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿದಾನದಲ್ಲಿ ಮಕರಜ್ಯೋತಿ ವೀಕ್ಷಣೆಗೆ ತಯಾರಿ ಪೂರ್ತಿಗೊಂಡಿದ್ದು, ಭಕ್ತಾದಿಗಳು ಭಾರಿ ಪ್ರಮಾನದಲ್ಲಿ ಕ್ಷೇತ್ರಕ್ಕೆ ಬಂದು ಸೇರುತ್ತಿದ್ದಾರೆ. ಜನವರಿ 15ರಂದು ಬೆಳಗಿನ ಜಾವ 2.09ಕ್ಕೆ ಮಕರ ಸಂಕ್ರಮಣ ಪೂಜೆ ನಡೆಯುವ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿ ವರೆಗೂ ಶ್ರೀ ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಬುಧವಾರ ಬೆಳಗ್ಗೆ 2.09ಕ್ಕೆ ಮಕರಸಂಕ್ರಮ ಪೂಜೆ ನಡೆದ ನಂತರ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು.
ಪಂದಳಂ ಅರಮನೆಯಿಂದ ಸೋಮವಾರ ಹೊರಟ, ಶ್ರೀ ಅಯ್ಯಪ್ಪ ದೇವರ ವಿಗ್ರಹಕ್ಕೆ ತೊಡಿಸಲಿರುವ ಪವಿತ್ರ ಆಭರಣಗಳ ಮೆರವಣಿಗೆ ಜ. 15ರಂದು ಮಧ್ಯಾಹ್ನ ಪಂಪೆಗೆ ತಲುಪಲಿದ್ದು, ಅಲ್ಲಿಂದ ಪಂದಳ ಅರಮನೆಯ ರಾಜಪ್ರತಿನಿಧಿಯ ಅನುಮತಿಯೊಂದಿಗೆ ನೀಲಿಮಲೆ ಬೆಟ್ಟವನ್ನು ಏರಲಿದೆ. ಶರಂಗುತ್ತಿಯಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ಆಭರಣ ಮೆರವಣಿಗೆಯನ್ನು ಇದಿರುಗೊಂಡು, ಸನ್ನಿದಾನಕ್ಕೆ ಕರೆದೊಯ್ಯುವರು. ಸಾಯಂಕಾಲ 5.30ಕ್ಕೆ ಸನ್ನಿದಾನ ತಲುಪುವ ಪವಿತ್ರ ಆಭರಣವನ್ನು ದೇವಸ್ಥಾನದ ತಂತ್ರಿವರ್ಯ ಹಾಗೂ ಮುಖ್ಯ ಅರ್ಚಕರು ಸೇರಿ ದೇಗುಲದೊಳಗೆ ಕೊಂಡೊಯ್ಯುವರು. ಶ್ರೀದೇವರ ವಿಗ್ರಹಕ್ಕೆ ಆಭರಣ ತೊಡಿಸಿ 6.30ರಿಂದ 6.45ರ ಕಾಲಾವಧಿಯಲ್ಲಿ ದೀಪಾರಾಧನೆ ನಡೆಯುವುದು. ನಂತರ ಪೊನ್ನಂಬಲ ಬೆಟ್ಟದಲ್ಲಿ ಮಕರಜ್ಯೋತಿ ಕಾಣಿಸಿಕೊಳ್ಳಲಿದೆ.
ಜ್ಯೋತಿ ವೀಕ್ಷಣೆಗೆ ಒಂಭತ್ತು ಕೇಂದ್ರ:
ಸನ್ನಿದಾನ ಆಸುಪಾಸಿನ ಒಂಬತ್ತು ಕೇಂದ್ರಗಳಲ್ಲಿ ಮಕರಜ್ಯೋತಿ ವೀಕ್ಷಣೆಗೆ ಅಯ್ಯಪ್ಪ ಭಕ್ತಾದಿಗಳು ಒಟ್ಟುಸೇರಲಿದ್ದಾರೆ. ಸನ್ನಿದಾನದ ಬಾಬರ ನಡೆ, ಅಪ್ಪ-ಅರವಣ ಕೌಂಟರ್ ಸನಿಹ, ಅಗ್ನಿಕುಂಡ ಸನಿಹ, ಮಾಳಿಗಪುರತ್ತಮ್ಮ ಕ್ಷೇತ್ರ ವಠಾರ, ಅನ್ನದಾನ ಮಂಟಪ, ಇನ್ಸಿನೇಟರ್ ಕೇಂದ್ರ, ಮರಕ್ಕೂಟ್ಟಂ, ಶರಂಗುತ್ತಿ, ಪಾಂಡಿತ್ತಾವಳ ಒಳಗೊಂಡಂತೆ ಪ್ರಮುಖ ಒಂಬತ್ತು ಕೇಂದ್ರಗಳಲ್ಲಿ ಭಕ್ತಾದಿಗಳು ಮಕರಜ್ಯೋತಿ ವೀಕ್ಷಿಸಲಿದ್ದಾರೆ. ಮಕರಜ್ಯೋತಿ ಅಂಗವಾಗಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ಬೃಹತ್ ಕಟ್ಟಡಗಳ ಮೇಲೆ ಏರಿ ಹಾಗೂ ಪಂಪೆಯ ಹಿಲ್ಟಾಪ್ನಲ್ಲಿ ಜ್ಯೋತಿ ವೀಕ್ಷಣೆಗೆ ಪೊಲೀಸರು ಅನುಮತಿ ನಿಷೇಧಿಸಿದ್ದಾರೆ. ಪಂಪೆಯ ಹಿಲ್ಟಾಪ್ನಲ್ಲಿ ಕೆಲವು ವರ್ಷಗಳ ಹಿಂದೆ ಭುಕುಸಿತದಿಂದ ಭಾರಿ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ ಇಲ್ಲಿಗೆ ತೆರಳಲು ಅವಕಾಶ ನಿರಾಕರಿಸಲಾಗುತ್ತಿದೆ.
ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ:
ಶಬರಿಮಲೆ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಜ. 15ರಂದು ಕೆಎಸ್ಸಾರ್ಟಿಸಿ ಪಂಪೆಯಿಂದ 950 ಬಸ್ಗಳನ್ನು ಸಂಚಾರಕ್ಕಿಳಿಸಲಿದೆ. ಇವುಗಳಲ್ಲಿ ಪಂಪೆ-ನೀಲಕ್ಕಲ್ ಮಧ್ಯೆ 450ಬಸ್ಗಳು ಚೈನ್ ಸರ್ವೀಸ್ ನಡೆಸಲಿದೆ.ಪಂಪೆಯಿಂದ ದೀರ್ಘ ದೂರ ಟರ್ಮಿನಲ್ನಿಂದ 500ಬಸ್ಗಳು ಸಂಚಾರ ನಡೆಸಲಿದೆ. ಇದಕ್ಕಾಗಿ ಎರುಮೇಲಿ, ಪತ್ತನಂತಿಟ್ಟ, ಕೊಟ್ಟಾರಕ್ಕರ, ಚೆಂಙನ್ನೂರ್, ಕೋಟ್ಟಾಯಂ ಡಿಪೋಗಳಿಂದ ಬಸ್ಗಳನ್ನು ಕರೆಸಿಕೊಳ್ಳಲಾಗಿದೆ. ಭಕ್ತಾದಿಗಳ ದಟ್ಟಣೆ ಪರಿಗಣಿಸಿ 10ಲಕ್ಷ ಟಿನ್ ಅರವಣ ಪಾಯಸ ಹಾಗೂ ಒಂದುವರೆ ಲಕ್ಷ ಪ್ಯಾಕೆಟ್ ಅಪ್ಪಕಜ್ಜಾಯ ಹೆಚ್ಚಾಗಿ ದಾಸ್ತಾನಿರಿಸಲಾಗಿದೆ.





