ಪೆರ್ಲ: ಸೃಜನಾತ್ಮಕ ಬೆಳವಣಿಗೆಗಳಿಗೆ ಪೂರಕವಾಗುವ ಕಲೆ, ಸಾಂಸ್ಕøತಿಕ ಚಟುವಟಿಕೆಗಳು ಸಮಾಜದ ಕ್ರಿಯಾತ್ಮಕ ನಿರಂತರತೆಗೆ ಬೆನ್ನೆಲುಬಾಗಿದೆ. ಭಾಷೆ ಸಂಪರ್ಕ ಮಾಧ್ಯಮ ಮಾತ್ರವಾಗದೆ ವಿಭಿನ್ನ ನೆಲೆಗಳ ವೈವಿಧ್ಯ ಬಳಕೆಗಳಿಂದ ಶ್ರೀಮಂತಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ತಿಕ ಚಟುವಟಿಕೆಗಳು ಸದಾ ನಡೆಯುತ್ತಿರಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತ್ತಿಕ-ಸಾಂಸ್ಕøತಿಕ ಸಂಸ್ಥೆಯಾದ ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಕಾಸರಗೋಡು ನೇತೃತ್ವದಲ್ಲಿ ಪೆರ್ಲದ ವ್ಯಾಪಾರಿ ಭವನ ಸಭಾಂಗಣದಲ್ಲಿ ಭಾನುವಾರ ಅಪರಾಹ್ನ ಆಯೋಜಿಸಲಾಗಿದ್ದ ಮಕರ ಸಂಕ್ರಾಂತಿ ಸಾಹಿತ್ಯ ಸಂಭ್ರಮ ಹಾಗೂ ಅಭಿನಂದನಾ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿನಾಡು ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕøತಿಯ ಪೂರಕ ಬೆಳವಣಿಗೆ ಇಂದಿನ ಕಾಲಘಟ್ಟದಲ್ಲಿ ಬಲಯುತವಾಗಬೇಕು. ಹೊಸ ತಲೆಮಾರು ಸೃಜನಾತ್ಮಕ, ಗುಣಮಟ್ಟದ ಅಕ್ಷರಗಳನ್ನು ಕಡೆದು ನಿಲ್ಲಿಸುವಲ್ಲಿ ಸಾಹಿತ್ಯ ಚಟುವಟಿಕೆಗಳು ಪ್ರಾಥಮಿಕ ತರಗತಿಗಳಂತೆ ಪರಿಪೋಶಿಸುತ್ತದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ, ಧಾರ್ಮಿಕ ಮುಂದಾಳು ಸದಾನಂದ ಶೆಟ್ಟಿ ಕುದ್ವ ಅವರು ಮಾತನಾಡಿ ಅಂತರಂಗದ ನೈಜತೆಗೆ ಧ್ವನಿಯಾಗುವ ಕಥೆ, ಕಾವ್ಯಗಳು ವ್ಯಕ್ತಿಯನ್ನು ಶಕ್ತಿಯಾಗಿ ರೂಪಿಸುತ್ತದೆ. ಕಲೆ, ಸಾಹಿತಿಗಳ ಸಮಾಜ ಕ್ಲೇಶ ರಹಿತವಾಗಿ ಒಗ್ಗಟ್ಟಿನಿಂದ ಮುನ್ನಡೆಸುತ್ತದೆ. ಜನರಲ್ಲಿ ಭಾಷಾಭಿಮಾನ, ಆತ್ಮಾಭಿಮಾನವನ್ನು ಸಾಹಿತ್ಯ ಪಡಿಮೂಡಿಸುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಜಾನಪದ ವಿದ್ವಾಂಸ, ಸಂಶೋಧಕ, ಪ್ರಾಧ್ಯಾಪಕ ಡಾ.ಸುಂದರ ಕೇನಾಜೆ ಅವರು ಮಾತನಾಡಿ, ಜಗತ್ತು ಇಂದು ಏಕಸೂತ್ರದಡಿಯಲ್ಲಿ ಒಗ್ಗೂಡಬೇಕು ಎಂಬ ಜಾಗತೀಕರಣ ಚಿಂತನೆ ಸಾಧುವಾದರೂ, ಪ್ರಾದೇಶಿಕತೆಯಲ್ಲೂ ನಾವು ಸಾಗಿಬಂದ ಬದುಕು ಇದೆ ಎನ್ನುವುದನ್ನು ಮರೆಮಾಚಲಾಗದು. ಈ ಹಿನ್ನೆಲೆಯಲ್ಲಿ ಜನಾಂಗೀಯ ಅಧ್ಯಯನಗಳು ಹೆಚ್ಚು ನಡೆದಂತೆ ಅದರೊಳಗಿನ ಸಂಕೀರ್ಣತೆ ಮತ್ತು ಇತರ ಭಿನ್ನತೆಗಳನ್ನು ಮೀರಿ ನಿಲ್ಲಲು ಸಾಧ್ಯವಾಗುತ್ತದೆ. ಸಾಹಿತ್ಯ, ಅಧ್ಯಯನಗಳು ಈ ನಿಟ್ಟಿನಲ್ಲಿ ಹೊಸತನದತ್ತ ತೆರೆದುಕೊಳ್ಳಬೇಕು ಎಂದರು. ಮಧ್ಯಮ ಎಂದಿಗೂ ವಸ್ತುವಿನ ಪ್ರಸ್ತುತಿಗೆ ಇರುವ ಸಾಧನವಾಗಿದ್ದು, ವಿಷಯದ ಮೇಲೆ ಗರಿಗೆದರಿ ಮೀರಿ ಗೆಲುವಿನ ಲಕ್ಷ್ಯದತ್ತ ಸಾಗಬಲ್ಲವರಾಗುತ್ತೇವೆ ಎಂದು ಅವರು ತಿಳಿಸಿದರು.
ಕಣ್ಣೂರು ವಿಶ್ವವಿದ್ಯಾನಿಲಯದಿಂದ ಡಾ.ಉಪ್ಪಂಗಳ ಶಂಕರನಾರಾಯಣ ಭಟ್ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನ ಭಾಗವತಿಕೆಯ ತೆಂಕು ಬಡಗಿನ ತೌಲನಿಕ ಅಧ್ಯಯನ ವಿಷಯದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ ಶಿಕ್ಷಕ, ಯಕ್ಷಗಾನ ಭಾಗವತ ಡಾ.ಸತೀಶ ಪುಣಿಚಿತ್ತಾಯ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ ಹಾಗೂ ಸಂಯೋಜಕ ಪುರುಷೊತ್ತಮ ಭಟ್ ಕೆ ಅವರು ಶಾಲುಹೊದೆಸಿ, ಅಭಿನಂದನಾ ಪತ್ರಗಳನ್ನಿತ್ತು ಗೌರವಿಸಿದರು.
ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯ, ಪ್ರಾಧ್ಯಾಪಕ ಟಿ.ಎ.ಎನ್.ಖಂಡಿಗೆ ಅವರು ಅಭಿನಂದನಾ ಭಾಷಣಗೈದರು. ಶಿವಪಡ್ರೆ ಅಭಿನಂದನಾ ಸ್ವರಚಿತ ಗೀತೆ ಹಾಡಿದರು. ವೇದಿಕೆಯ ನಿರ್ದೇಶಕರಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ವೆಂಕಟ್ ಭಟ್ ಎಡನೀರು, ಹರೀಶ್ ಪೆರ್ಲ, ಪ್ರೊ.ಎ.ಶ್ರೀನಾಥ್ ಕಾಸರಗೋಡು ಉಪಸ್ಥಿತರಿದ್ದರು. ಈ ಸಂದರ್ಭ ಆಯೋಜಿಸಲಾಗಿದ್ದ ಕಥಾಗೋಷ್ಠಿಯ ಅಧ್ಯಕ್ಷತೆಯನ್ನು ಯುವ ಸಾಹಿತಿ ಸೀತಾಲಕ್ಷ್ಮೀ ವರ್ಮ ವಿಟ್ಲ ವಹಿಸಿದ್ದರು. ವಿಶೇಷ ಆಕರ್ಷಣೆಯಾಗಿ ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು ಅವರ ವೈವಿಧ್ಯಮಯ ವ್ಯಂಗ್ಯಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ ಸ್ವಾಗತಿಸಿ, ಪರಮೇಶ್ವರ ನಾಯ್ಕ್ ಬಾಳೆಗುಳಿ ವಂದಿಸಿದರು. ಪುರುಷೋತ್ತಮ ಭಟ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.



