HEALTH TIPS

ಕೇರಳ ರಾಜ್ಯಪಾಲರ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ, 'ಮೋಸ್ಟ್ ವೆಲ್ ಕಮ್' ಎಂದ ಖಾನ್

     
       ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಮತ್ತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ನಡುವಿನ ರಾಜಕೀಯ ವಾಕ್ಸಮರ ಶನಿವಾರ ಮತ್ತೊಂದು ರೂಪ ಪಡೆದಿದ್ದು, ಕಾಂಗ್ರೆಸ್ ನೇತೃತ್ವದ  ಪ್ರತಿಪಕ್ಷ ರಾಜ್ಯಪಾಲರ ವಿರುದ್ಧವೇ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲು ಮುಂದಾಗಿದೆ.
      ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲು ಅನುಮತಿ ಕೋರಿ ಕೇರಳ ವಿಧಾನಸಭೆಯ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಅವರು ವಿಧಾನಸಭೆ ಸ್ಪೀಕರ್‍ಗೆ ನೋಟಿಸ್ ನೀಡಿದ್ದಾರೆ. ಈ ಮೂಲಕ ಕೇರಳದ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ನಡೆಯುತ್ತಿದ್ದ ಗುದ್ದಾಟಕ್ಕೆ ಈಗ ಮತ್ತೊಂದು ಆಯಾಮ ದೊರಕಿದ್ದು, ಆಡಳಿತ ಪಕ್ಷದ ಪರವಾಗಿ ಪ್ರತಿಪಕ್ಷವು ನಿಂತಿದೆ.
      ಕಳೆದ ವರ್ಷ ಡಿಸೆಂಬರ್ 31ರಂದು ಸಿಎಎ ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಬಿಜೆಪಿಯ ಏಕೈಕ ಶಾಸಕ ನಿರ್ಣಯದ ವಿರುದ್ಧವಾಗಿ ಮತ ಹಾಕಿದ್ದರು. ನಂತರ ಸಿಎಎ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದು ಸಂವಿಧಾನ ಬಾಹಿರ ಎಂದು ರಾಜ್ಯಪಾಲ ಖಾನ್ ಅವರು ಬಹಿರಂಗವಾಗಿಯೇ ಹೇಳಿದ್ದರು. ರಾಜ್ಯಪಾಲರು ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ವಿರುದ್ಧ ಮಾತನಾಡುವ ಮೂಲಕ ವಿಧಾನಸಭೆಯ ಅಧಿಕಾರ ಮತ್ತು ಹಕ್ಕುಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ರಮೇಶ್ ಚೆನ್ನಿಥಾಲಾ ಅವರು ಹೇಳಿದ್ದಾರೆ.
     ತಮ್ಮ ವಿರುದ್ಧ ಪ್ರತಿಪಕ್ಷ ನಿರ್ಣಯ ಮಂಡಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಖಾನ್ ಅವರು, ನಾನು ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರತಿಪಕ್ಷ ಕಾಂಗ್ರೆಸ್ ನನ್ನ ವಿರುದ್ಧ ನಿರ್ಣಯ ಮಂಡಿಸುವುದಾದರೆ ಸ್ವಾಗತಿಸುತ್ತೇನೆ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries