ಬದಿಯಡ್ಕ: ನಮ್ಮ ಧರ್ಮ, ಸಂಸ್ಕಾರ, ಇತಿಹಾಸ, ಪುರಾಣಗಳ ಕುರಿತು ಇತರರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ನೀಡಲು ಪ್ರತಿಯೊಬ್ಬ ಹಿಂದು ತಯಾರಾಗಬೇಕಾಗಿದೆ. ಬಾಲಗೋಕುಲಗಳ ತರಗತಿಗಳ ಮೂಲಕ ನಮ್ಮ ಮಕ್ಕಳು ಸಂಸ್ಕಾರವಂತರಾಗಿ ತಲೆಯೆತ್ತಿ ನಿಲ್ಲಬೇಕಾಗಿದೆ. ವಿದ್ಯಾಭ್ಯಾಸದಲ್ಲಿ ಮಕ್ಕಳು ಹಿಂದೆ ಬಿದ್ದರೂ ನಮ್ಮ ಸಂಸ್ಕಾರದ ವಿಚಾರದಲ್ಲಿ ಯಾರೂ ಹಿಂದೆ ಬೀಳಬಾರದು ಎಂದು ಅಮೃತ ಬಾಲಸಂಸ್ಕøತಿಯ ರಾಜ್ಯ ಸಂಚಾಲಕ ರಾಜನ್ ಮುಳಿಯಾರು ಹೇಳಿದರು.
ಕುಂಬ್ಡಾಜೆ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಸಭಾಭವನದಲ್ಲಿ ಭಾನುವಾರ ನಡೆದ ಬಾಲಗೋಕುಲ ಕಾಸರಗೋಡು ತಾಲೂಕು ಸಮಿತಿಯ ಬದಿಯಡ್ಕ ಮಹಾಮಂಡಲ ಗೋಕುಲೋತ್ಸವದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಇಸ್ಲಾಂ ಮತಪಂಡಿತರಿಗೆ ಹಣವನ್ನು ನೀಡುವ ಕೇರಳ ಸರ್ಕಾರವು ದೇವಸ್ಥಾನಗಳಲ್ಲಿ ಭಗವದ್ಗೀತೆ ಕಲಿಸಲು ಅನುಮತಿಯನ್ನು ನೀಡದಂತಹ ಪರಿಸ್ಥಿತಿಯನ್ನು ನಾವು ಎದುರಿಸಬೇಕಾಗಿದೆ. ಲೋಕಾಃ ಸಮಸ್ತಾಃ ಸುಖಿನೋಭವಂತು ಎಂದು ಪ್ರಾರ್ಥಿಸುವ ಪವಿತ್ರವಾದ ಹಿಂದೂ ಧರ್ಮದ ಪವಿತ್ರವಾದ ಗ್ರಂಥಗಳ ತಿರುಳನ್ನು ಪ್ರತಿಯೋರ್ವ ಹಿಂದುವೂ ಮನನಮಾಡಬೇಕಿದೆ. ಬಾಲಗೋಕುಲದಿಂದ ಬೆಳೆದು ಬಂದ ಮಕ್ಕಳು ಸಂಸ್ಕಾರವಂತರಾಗಿ ಹಿಂದೂ ಸಂಸ್ಕøತಿಯನ್ನು ಬೆಳಗಿಸುವರಾಗಿ ಹೊರಹೊಮ್ಮಲಿ ಎಂದರು.
ಹಿರಿಯರಾದ ಅಜ್ಜಿಮೂಲೆ ಕೃಷ್ಣಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪೊಡಿಪ್ಪಳ್ಳ ಶ್ರೀ ಚಿರುಂಭ ಭಗವತಿ ಕ್ಷೇತ್ರದ ಅಂಬಾಡಿ ಕಾರ್ನವರ್ ದೀಪಜ್ವಲನೆಗೈದು ಉದ್ಘಾಟಿಸಿದರು. ರಾಜೇಶ್ ಪೈಕ ನಿರೂಪಿಸಿದರು. ಬಾಲಗೋಕುಲ ಕಾಸರಗೋಡು ತಾಲೂಕು ಪ್ರಮುಖ್ ಉಪಸ್ಥಿತರಿದ್ದರು.
ಬಾಲಗೋಕುಲ ಬದಿಯಡ್ಕ ಮಹಾಮಂಡಲ ಪ್ರಮುಖ್ ದಿನೇಶ್ ಮಾಸ್ತರ್ ಕೆಡೆಂಜಿ ಸ್ವಾಗತಿಸಿ, ಕಾರ್ಯದರ್ಶಿ ಯೋಗೀಶ್ ಪೊಡಿಪ್ಪಳ್ಳ ವಂದಿಸಿದರು. ಸುರಕ್ಷಾ ನಾಕೂರು ವಂದೇ ಮಾತರಂ ಹಾಡಿದರು. ಬೆಳಗ್ಗೆ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಿಂದ ಭವ್ಯವಾದ ಶೋಭಾಯಾತ್ರೆ ನಡೆಯಿತು. ಚೆಂಡೆಮೇಳ, ಮುತ್ತುಕೊಡೆಗಳು ಮೆರವಣಿಗೆಗೆ ಶೋಭೆಯನ್ನು ತಂದಿತು. ಬಾಲಗೋಕುಲದ ಮಕ್ಕಳಿಗೆ ನಿರ್ಧಾರಿತ ಬೌದ್ಧಿಕ ಹಾಗೂ ಶಾರೀರಿಕ ಸ್ಪರ್ಧೆಗಳನ್ನು ನಡೆಸಲಾಯಿತು.






